ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಆಪ್ತನಿಗೆ ಹಣ ಡಬಲ್ ಮಾಡಿ ಕೊಡುವುದಾಗಿ 25 ಲಕ್ಷ ರೂ. ವಂಚನೆ ಮಾಡಿ ಪರಾರಿಯಾಗಿದ್ದ ಏಳು ಜನ ಆರೋಪಿಗಳನ್ನು ಕಾಕತಿ ಪೊಲೀಸರು (Police) ಬಂಧಿಸಿದ್ದಾರೆ.
ಬಾಗಲಕೋಟೆಯ ಮಹಾಲಿಂಗಪುರದ ಜಾಹ್ನವಿ ಸೇರಿದಂತೆ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಗ್ಯಾಂಗ್ ಸಚಿವ ಸತೀಶ್ ಜಾರಕಿಹೊಳಿ ಆಪ್ತ ಸಿದ್ಧನಗೌಡ ಬಿರಾದಾರ್ ಅವರಿಗೆ ಕೊಲ್ಹಾಪುರದಿಂದ ವಾಪಸ್ ಬೆಳಗಾವಿಗೆ ಬರುವಾಗ ಬಸ್ನಲ್ಲಿ ಪರಿಚಯವಾಗಿರುತ್ತದೆ. ಈ ವೇಳೆ ಜಾಹ್ನವಿ ಸಿದ್ಧನಗೌಡರ ನಂಬರ್ ಪಡೆದು ನಂಬಿಕೆ ಗಳಿಸಿದ್ದಾಳೆ. ಇದನ್ನೂ ಓದಿ: ಬೈಲಹೊಂಗಲದಲ್ಲಿ ಭೀಕರ ರಸ್ತೆ ಅಪಘಾತ – ಇಬ್ಬರ ದುರ್ಮರಣ
ನಮ್ಮ ಅಂಕಲ್ ಬ್ಯಾಂಕ್ನಲ್ಲಿ ಕೆಲಸ ಮಾಡ್ತಿದ್ರು, ಅವರ ಬಳಿ ಸಾಕಷ್ಟು ದುಡ್ದಿದೆ. ಹಣ ಕೊಟ್ಟರೆ ಡಬಲ್ ಮಾಡಿಕೊಡ್ತಿವಿ ಎಂದು ಸಿದ್ಧನಗೌಡ ಮುಂದೆ ಜಾಹ್ನವಿ ಕತೆ ಹೇಳಿದ್ದಾಳೆ. ಇದನ್ನ ನಂಬಿದ ಸಿದ್ಧನಗೌಡ ನವೆಂಬರ್ ತಿಂಗಳಿನಲ್ಲಿ 25 ಲಕ್ಷ ರೂ. ಹಣವನ್ನು ತೆಗೆದುಕೊಂಡು ಕಾಕತಿ ಠಾಣಾ ವ್ಯಾಪ್ತಿಯ ಹೋಟೆಲ್ ಒಂದಕ್ಕೆ ಹೋಗಿದ್ದಾರೆ. ಈ ವೇಳೆ ಆರೋಪಿಗಳು, ಪೊಲೀಸರಂತೆ ರೈಡ್ ಮಾಡಿ ಹಣ ದೋಚಿ ಪರಾರಿಯಾಗಿದ್ದರು.
ಹಣವನ್ನು ಜಾಹ್ನವಿ ಕೈಗೆ ಇಡುತ್ತಿದ್ದಂತೆ ಅಲ್ಲಿಯೇ ಕುಳಿತಿದ್ದ ದರೋಡೆ ಗ್ಯಾಂಗ್ನ ನಕಲಿ ಪೊಲೀಸರು ಮಹಿಳೆಯನ್ನು ಅರೆಸ್ಟ್ ಮಾಡಿದ ರೀತಿಯಲ್ಲಿ ಕರೆದುಕೊಂಡು ಹೋಗಿದ್ದರು. ಇತ್ತ ಹಣ ಕಳೆದುಕೊಂಡ ಸಿದ್ಧನಗೌಡ ಏನು ಮಾಡಬೇಕೆಂದು ತೋಚದೆ ಕಾಕತಿ ಪೆÇಲೀಸ್ ಠಾಣೆಗೆ ಹೋಗಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಂತಹ ಪೊಲೀಸರು ಇಲ್ಲಿ ಯಾರೂ ಇಲ್ಲ. ಅಂತಹ ಪ್ರಕರಣ ದಾಖಲಾಗಿಲ್ಲ ಎಂದಿದ್ದಾರೆ. ಈ ವೇಳೆ ಸಿದ್ಧನಗೌಡ ತಾವು ಮೋಸ ಹೋಗಿದ್ದು ಅರಿವಾಗಿದೆ.
ಈ ಸಂಬಂಧ ಸಿದ್ಧನಗೌಡ ಅವರು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಹೋಟೆಲ್ನ ಸಿಸಿಟಿವಿ ದೃಶ್ಯಾವಳಿ ಆಧರಿಸಿ ವಂಚಕರನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ 6 ಲಕ್ಷ ರೂ. ವಸೂಲಿ ಮಾಡಿದ್ದಾರೆ. ವಿಚಾರಣೆ ವೇಳೆ ಗ್ಯಾಂಗ್ನ ಮುಖ್ಯ ಕಾಯಕವೇ ಹಣ ಡಬಲ್ ಮಾಡುವ ಹೆಸರಲ್ಲಿ ಜನರಿಗೆ ವಂಚಿಸುವುದಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಇನ್ನೂ ಯಾವೆಲ್ಲ ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ ಎಂದು ತನಿಖೆಯ ಬಳಿಕ ತಿಳಿಯ ಬೇಕಿದೆ. ಇದನ್ನೂ ಓದಿ: ಟೀಚರ್ ಕೆಲಸಕ್ಕೆಂದು ಯುವತಿಯನ್ನು ಕರೆದೊಯ್ದು ನಿರಂತರ ಅತ್ಯಾಚಾರ – ಮೌಲ್ವಿ ಅರೆಸ್ಟ್