ರಾಯಚೂರು: ನೀರಿನ ಹೊಂಡಕ್ಕೆ ಬಿದ್ದು ಒಂದೇ ಕುಟುಂಬದ ಇಬ್ಬರು ಬಾಲಕರು ಸಾವನ್ನಪ್ಪಿದ ಘಟನೆ ನಗರದ ಆಶ್ರಯ ಕಾಲೋನಿಯಲ್ಲಿ ನಡೆದಿದೆ.
9 ವರ್ಷದ ಶಾಹಿಲ್ ಹಾಗೂ ಮೆಹಬೂಬ್ ಮೃತ ದುರ್ದೈವಿ ಸಹೋದರರು.
ಇಲ್ಲಿನ ಬೆಟ್ಟದಲ್ಲಿ ಕಲ್ಲಿನ ಬಂಡೆಗಳನ್ನ ತೆಗೆದಿದ್ದರಿಂದ ಹಾಗೂ ನಿರಂತರವಾಗಿ ನಡೆದ ಕಲ್ಲುಗಣಿಗಾರಿಕೆಯಿಂದ ದೊಡ್ಡ ದೊಡ್ಡ ತಗ್ಗುಗಳ ನಿರ್ಮಾಣವಾಗಿವೆ. ಮಳೆಯಿಂದಾಗಿ ತಗ್ಗುಗಳಲ್ಲಿ ನೀರು ತುಂಬಿ ಹೊಂಡ ನಿರ್ಮಾಣವಾಗಿದ್ದು, ಹೊಂಡದಲ್ಲಿ ಈಜಲು ಹೋಗಿ ಬಾಲಕರು ಪ್ರಾಣ ಬಿಟ್ಟಿದ್ದಾರೆ.
ಈ ಹಿಂದೆಯೂ ಇಂತಹ ಘಟನೆಗಳು ನಡೆದಿದ್ದು, ಇದುವರೆಗೆ ಒಟ್ಟು ನಾಲ್ಕು ಜನ ಬಾಲಕರು ಪ್ರಾಣ ಕಳೆದುಕೊಂಡಿದ್ದಾರೆ. ರುದ್ರಭೂಮಿ ಜಾಗದಲ್ಲಿನ ಈ ಹೊಂಡಗಳನ್ನು ಕೂಡಲೇ ಮುಚ್ಚಬೇಕು ಅಂತ ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಘಟನೆ ಕುರಿತಂತೆ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.