ಕಾರವಾರ: ಭಟ್ಕಳದ ಅರಬ್ಬಿ ಸಮುದ್ರದಲ್ಲಿ ಮುಳುಗುತ್ತಿದ್ದ ದೋಣಿಯನ್ನು ಮತ್ತೊಂದು ದೋಣಿಯ ಮೀನುಗಾರರೇ ರಕ್ಷಿಸಿದ್ದಾರೆ. ಹೀಗಾಗಿ ಅದರಲ್ಲಿದ್ದ ಎಲ್ಲಾ 15 ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ.
ಸಮುದ್ರ ದಡದಿಂದ 25 ನಾಟಿಕಲ್ ಮೈಲು ದೂರದ ಆಳ ಸಮುದ್ರದಲ್ಲಿ ಅವಘಡ ನಡೆದಿತ್ತು. ದೋಣಿಯು ಕುಂದಾಪುರ ತಾಲೂಕಿನ ಗಂಗೊಳ್ಳಿಯ ಮಧುಕರ ಪೂಜಾರಿ ಎಂಬವರದ್ದಾಗಿದೆ. `ಮೂಕಾಂಬಿಕಾ’ ಹೆಸರಿನ ಆ ದೋಣಿಯಲ್ಲಿ ಭಟ್ಕಳ ಬಂದರಿನಿಂದ ಮೀನುಗಾರಿಕೆಗೆ ಹೋಗಲಾಗಿತ್ತು.
ದೋಣಿಯ ತಳಭಾಗ ಒಡೆದು ಮುಳುಗುವ ಹಂತ ತಲುಪಿದ್ದನ್ನು ಸಮೀಪದಲ್ಲೇ ಇದ್ದ ಇತರ ದೋಣಿಗಳ ಮೀನುಗಾರರು ಗಮನಿಸಿದ್ದಾರೆ. ಕೂಡಲೇ ಎಚ್ಚೆತ್ತ ಅವರು, ರಕ್ಷಣೆಗೆ ಧಾವಿಸಿ ಕಾರ್ಯಾಚರಣೆ ಮಾಡಿದರು. ಸಂಜೆಯ ವೇಳೆಗೆ ದೋಣಿಯನ್ನು ಎಳೆದು ದಡಕ್ಕೆ ತರಲಾಯಿತು ಎಂದು ಸ್ಥಳೀಯರಾದ ಶಂಕರ ಮೊಗೇರ್ ಮಾಹಿತಿ ನೀಡಿದರು.