ಚಿಕ್ಕಮಗಳೂರು: ಸುಮಾರು 15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ ಗ್ರಾಮದಲ್ಲಿ ನಡೆದಿದೆ.
ಅತ್ತಿಗೆರೆ ಗ್ರಾಮದ ಮಂಜುನಾಥ್ ಗೌಡ ಎಂಬವರ ತೋಟದಲ್ಲಿ 15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಕಾಫಿ ತೋಟದಲ್ಲಿ ಕಾಳಿಂಗ ಸರ್ಪಗಳಿರುವುದು ಮಾಮೂಲಿ. ಅವು ಇದ್ದಲ್ಲೇ ಇರುವುದಿಲ್ಲ. ಬರುತ್ತದೆ, ಹೋಗುತ್ತೆ ಎಂದು ಜನ ಕೂಡ ಸುಮ್ಮನಾಗುತ್ತಿದ್ದರು. ಇದನ್ನು ಓದಿ: ಮನವಿ ಸ್ವೀಕರಿಸಲು ಬಾರದ ಸಚಿವರು – ಮನವಿ ಪತ್ರ, ಹೂವುಗಳನ್ನು ಸಮುದ್ರಕ್ಕೆ ಅರ್ಪಿಸಿ ಮೀನುಗಾರರಿಂದ ವಿನೂತನ ಪ್ರತಿಭಟನೆ
ಆದರೆ ಲಾಕ್ಡೌನ್ ಇರುವುದರಿಂದ ತೋಟದಲ್ಲಿ ಹೆಚ್ಚಿನ ಕೆಲಸಗಾರರು ಇರಲಿಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಹೀಗೆ ಕಳೆದ ಎರಡು ದಿನಗಳಿಂದ ಕಾಳಿಂಗ ಸರ್ಪ ದಿನ ಕಾಣಿಸಿಕೊಳ್ಳುತ್ತಿರುವುದರಿಂದ ಕೆಲಸಗಾರರು ಭಯಗೊಂಡಿದ್ದಾರೆ. ಕೊನೆಗೆ ಆ ಬೃಹತ್ ಕಾಳಿಂಗ ಸರ್ಪವನ್ನ ಕಂಡ ಕೆಲಸಗಾರನೊಬ್ಬ ತೋಟದ ಮಾಲೀಕರ ಗಮನಕ್ಕೆ ತಂದಿದ್ದಾರೆ. ಕೂಡಲೇ ತೋಟದ ಮಾಲೀಕ ಮಂಜುನಾಥ್ ಗೌಡ ವಿಷಯವನ್ನ ಸ್ನೇಕ್ ಆರೀಫ್ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಸ್ನೇಕ್ ಆರೀಫ್ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಾಳಿಂಗ ಸರ್ಪವನ್ನ ಸೆರೆ ಹಿಡಿದಿದ್ದಾರೆ. ಕಾಫಿ ತೋಟ ಆಗಿರುವುದರಿಂದ ಕಾಳಿಂಗ ಸರ್ಪ ತೋಟದೊಳಗೆ ವೇಗವಾಗಿ ಸಂಚರಿಸುತ್ತೆ. ಗಿಡಗಳ ಮಧ್ಯೆ ಹಾವುಗಳು ಹೋದಷ್ಟು ವೇಗವಾಗಿ ಜನಸಾಮಾನ್ಯರು ಹೋಗಿ ಹಾವನ್ನ ಹಿಡಿಯುವುದು ಕಷ್ಟ. ಆದರೂ ಸ್ನೇಕ್ ಆರೀಫ್ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಾಳಿಂಗನನ್ನ ಸೆರೆ ಹಿಡಿದಿದ್ದಾರೆ.
ಬಳಿಕ ಸೆರೆ ಹಿಡಿದ ಕಾಳಿಂಗ ಸರ್ಪವನ್ನ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಪರಿಸರವಾದಿಗಳು ಜಿಲ್ಲೆಯ ಮಲೆನಾಡು ಭಾಗದಲ್ಲಿ ಹಾವಾಡಿಗರು ಹಾವನ್ನ ಸೆರೆ ಹಿಡಿಯುವ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇದನ್ನು ಓದಿ:ಮದ್ಯಕ್ಕಾಗಿ ಕ್ಯೂ- ಮದ್ಯದಂಗಡಿ ಮುಂದೆ ನೂಕುನುಗ್ಗಲು