ಮಂಗಳೂರು: ಕಲ್ಲಿನ ಕೋರೆಯಲ್ಲಿ ಈಜಲು ತೆರಳಿದ್ದ ವೇಳೆ ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮಂಗಳೂರಿನ ಅಡ್ಯಾರ್ಪದವಿನಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ 13 ವರ್ಷದ ತಮೀಮ್ ಮೃತಪಟ್ಟ ಬಾಲಕ. ತಮೀಮ್ ತನ್ನ ಸ್ನೇಹಿತರೊಂದಿಗೆ ಈಜಲು ಕಲ್ಲಿನ ಕೋರೆಗೆ ತೆರಳಿದ್ದಾನೆ. ಕೋರೆಯಲ್ಲಿ ಈಜುವ ವೇಳೆ ಮುಳುಗಿ ಮೃತಪಟ್ಟಿದ್ದಾನೆ. ಕಳೆದ ಕೆಲ ದಿನಗಳಿಂದ ಮಂಗಳೂರು ಪರಿಸರದಲ್ಲಿ ನಿರಂತರ ಮಳೆಯಾಗುತ್ತಿದ್ದರಿಂದ ಕಲ್ಲಿನ ಕೋರೆಯಲ್ಲಿ ನೀರು ತುಂಬಿಕೊಂಡಿತ್ತು.
ತಮೀಮ್ ಈಜಾಡುತ್ತಾ ನೀರಿರುವ ಮಧ್ಯಭಾಗವನ್ನು ತಲುಪಿದ್ದು, ನಿಯಂತ್ರಣ ಕಳೆದುಕೊಂಡು ಮುಳುಗಲಾರಂಭಿಸಿದ್ದಾನೆ. ಕೂಡಲೇ ಸ್ನೇಹಿತರು ರಕ್ಷಿಸುವುದಕ್ಕೆ ಮುಂದಾದರೂ ಸಾಧ್ಯವಾಗಲಿಲ್ಲ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಬಾಲಕನ ಶವ ಹೊರತೆಗೆದಿದ್ದಾರೆ.
ಘಟನೆ ಬಳಿಕ ಸ್ಥಳೀಯರು ಪ್ರತಿಭಟನೆಗಾಗಿ ಮುಂದಾಗಿದ್ದು, ಕಾನೂನುಬಾಹಿರ ಕಲ್ಲು ಕ್ವಾರಿಯ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.