ನೆಲಮಂಗಲ: ಗ್ರಾಮ ಪಂಚಾಯ್ತಿ ಚುನಾವಣೆ ಮತ್ತು ಮುಂದೆ ಬರುವ ಹಬ್ಬ, ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ನೆಲಮಂಗಲ ಉಪವಿಭಾಗ ಪೊಲೀಸರು ದಿಟ್ಟ ಕ್ರಮ ಕೈಗೊಂಡಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ಉಪವಿಭಾಗದಲ್ಲಿ, ರಾತ್ರೋರಾತ್ರಿ ರೌಡಿಗಳಿಗೆ ಶಾಕ್ ನೀಡಿದ ಪೊಲೀಸರು, 100ಕ್ಕೂ ರೌಡಿಗಳ ಪರೇಡ್ ನಡೆಸಿದ್ದಾರೆ. ನೆಲಮಂಗಲ ಉಪವಿಭಾಗದ ರೌಡಿಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ರೌಡಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ರೌಡಿಗಳ ಬಳಿಯಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
100ಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ಪೊಲೀಸ್ ಸಿಬ್ಬಂದಿ ಹಾಗೂ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಚೆನ್ನಣ್ಣನವರ್ ನೇತೃತ್ವದಲ್ಲಿ ದಾಳಿ ನಡೆದಿದೆ. ನಂತರ ಇಂದು ಡಾ.ಬಿ.ಆರ್. ಅಂಬೇಡ್ಕರ್ ಮೈದಾನದಲ್ಲಿ ಪರೇಡ್ ನಡೆಸಿದರು. ಇತ್ತಿಚೇಗೆ ರಿಯಲ್ ಎಸ್ಟೇಟ್, ಲ್ಯಾಂಡ್ ಮಾಫಿಯಾ ದಲ್ಲಿ ಸ್ಥಳೀಯರ ರೌಡಿಗಳ ಹೆಸರು ಕೇಳಿ ಬಂದಿತ್ತು. ಈ ಹಿನ್ನೆಲೆ ನೆಲಮಂಗಲ ಡಿವೈಎಸ್ಪಿ ಮೋಹನ್, ಸರ್ಕಲ್ ಇನ್ಸ್ ಪೆಕ್ಟರ್ ಶಿವಣ್ಣ ಹಾಗೂ ಮಾದನಾಯಕನಹಳ್ಳಿ ಇನ್ಸ್ ಪೆಕ್ಟರ್ ಸತ್ಯನಾರಯಣ ನೇತೃತ್ವದಲ್ಲಿ ದಾಳಿ ನಡೆಸಿ ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಇತ್ತೀಚೆಗೆ ನೆಲಮಂಗಲದಲ್ಲಿ ಯುವಕನ ಕೊಲೆ ಕೇಸ್ ನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ರೌಡಿ ಚಟುವಟಿಕೆಗೆ ಖಡಕ್ ಆಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.