ಮಂಗಳೂರು: ಬೃಹತ್ ಗಾತ್ರದ ಹೆಬ್ಬಾವನ್ನೇ ಕಾಳಿಂಗ ಸರ್ಪವೊಂದು ನುಂಗಿದ ಅಪರೂಪದ ಹಾಗೂ ಅಚ್ಚರಿಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿಯ ಸೋಮಂತಡ್ಕ ಎಂಬಲ್ಲಿನ ಮನೆಯೊಂದರ ತೋಟದಲ್ಲಿ ಎರಡು ದಿನದಿಂದ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪವೊಂದು ಇದ್ದಲ್ಲೇ ಇತ್ತು. ಇದನ್ನು ಗಮನಿಸಿದ ಮನೆಯವರು ಬೆಳ್ತಂಗಡಿಯ ಉರಗ ತಜ್ಞ ಸ್ನೇಕ್ ಅಶೋಕ್ಗೆ ಮಾಹಿತಿ ನೀಡಿ ಕರೆಸಿಕೊಂಡಿದ್ದರು. ಈ ವೇಳೆ ಕಾಳಿಂಗ ಸರ್ಪವನ್ನು ಗಮನಿಸಿದ ಉರಗ ತಜ್ಞ ಅಶೋಕ್ ಕಾಳಿಂಗ ಸರ್ಪದ ಹೊಟ್ಟೆಯಲ್ಲಿ ಏನೋ ಇದೆ ಎಂದು ಅದನ್ನು ಹೊರ ತೆಗೆಯಲು ಯತ್ನಿಸಿದರು.
ಈ ವೇಳೆ ಕಾಳಿಂಗ ಸರ್ಪದ ಹೊಟ್ಟೆಯಿಂದ ಬೃಹತ್ ಆಕಾರದ ಹೆಬ್ಬಾವನ್ನೇ ಹೊರತೆಗೆಯಲಾಗಿದೆ. ಎರಡು ದಿನದ ಮೊದಲೇ ಕಾಳಿಂಗ ಸರ್ಪ ಹೆಬ್ಬಾವನ್ನು ನುಂಗಿರುವುದರಿಂದ ಹೆಬ್ಬಾವು ಕಾಳಿಂಗ ಸರ್ಪದ ಹೊಟ್ಟೆಯೊಳಗೇ ಉಸಿರುಗಟ್ಟಿ ಮೃತಪಟ್ಟಿದೆ. ಇದೀಗ ಸ್ನೇಕ್ ಅಶೋಕ್ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.
ಹೆಬ್ಬಾವು ಹಾವು, ನಾಯಿ, ಬೆಕ್ಕು, ಕೋಳಿ, ಮೊಲ ಸೇರಿದಂತೆ ಇತರೆ ಪ್ರಾಣಿ ಪಕ್ಷಿಗಳನ್ನು ನುಂಗುತ್ತಿತ್ತು. ಆದರೆ ಇಲ್ಲಿ ಮಾತ್ರ ಹೆಬ್ಬಾವನ್ನೇ ಕಾಳಿಂಗ ಸರ್ಪ ನುಂಗಿ ಅಚ್ಚರಿ ಮೂಡಿಸಿದೆ.