ಹಾಸನ: ಹಾಲನ್ನು ಸಂಗ್ರಹಿಸಲು ಹೋಗುತ್ತಿದ್ದ ಹಾಲಿನ ಟ್ಯಾಂಕರ್ ಉರುಳಿಬಿದ್ದಿದ್ದು, ವ್ಯರ್ಥವಾಗಿ ಚೆಲ್ಲಿ ಹೋಗುತ್ತಿದ್ದ ಹಾಲನ್ನು ನೋಡಿದ ಜನರು ಬಿಂದಿಗೆ, ಪಾತ್ರೆಗಳಲ್ಲಿ ಸಂಗ್ರಹಿಸಿದ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ನಡೆದಿದೆ.
ಅರಕಲಗೂಡು ತಾಲೂಕಿನ ಕೆರೆಕೋಡಿ ಮತ್ತು ಬಿಸಲಹಳ್ಳಿ ನಡುವಿನ ರಸ್ತೆ ತಿರುವಿನಲ್ಲಿ ಹಾಲಿನ ಟ್ಯಾಂಕರ್ ಪಲ್ಟಿ ಹೊಡೆದಿದೆ.
ಪರಿಣಾಮ ಟ್ಯಾಂಕರ್ನಿಂದ ಹಾಲು ವ್ಯರ್ಥವಾಗಿ ರಸ್ತೆಗೆ ಸುರಿದು ಹೋಗುತ್ತಿತ್ತು. ಇದನ್ನು ನೋಡಿದ ಜನರು ಮನೆಯಿಂದ ಬಿಂದಿಗೆ, ಪಾತ್ರೆಗಳನ್ನು ತಂದು ತುಂಬಿಕೊಂಡು ಹೋಗಿದ್ದಾರೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಚಾಲಕನನ್ನು ರಕ್ಷಿಸಿದ್ದಾರೆ. ಟ್ಯಾಂಕರ್ ಪಲ್ಟಿಯಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.