ಧಾರವಾಡ: ಹಳ್ಳದ ಪಕ್ಕ ಸಿಲುಕಿದ್ದ ಕುರಿ ಹಾಗೂ ಕುರಿಗಾಯಿಯನ್ನು ರಕ್ಷಣೆ ಮಾಡಿದ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದ ಬಳಿ ನಡೆದಿದೆ.
ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಬಹುತೇಕ ಹಳ್ಳಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಗುಮ್ಮಗೋಳ ಹಾಗೂ ಶಿರೂರ ಗ್ರಾಮದ ಹಳ್ಳದ ಬಳಿ ಕುರಿಗಾಯಿಗಳು ಸಿಲುಕಿದ್ದ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಆಗಮಿಸಿದ ನವಲಗುಂದ ತಹಶಿಲ್ದಾರ್ ನವೀನ್ ಹುಲ್ಲೂರ, ಸ್ಥಳಿಯ ಜನರ ಜೊತೆ ಸೇರಿ ಕುರಿ ಹಾಗೂ ಕುರಿಗಾಯಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಿದರು.
ಸುಮಾರು 200 ಕುರಿಗಳ ಜೊತೆ ಹಳ್ಳದ ಪಕ್ಕದಲ್ಲಿ ನಿಂತಿದ್ದ 6 ಕುರಿಗಾಯಿಗಳು ಹಳ್ಳದ ಬಳಿಯೇ ತಂಗಿದ್ದರು. ಆದರೆ ಬೆಳಗ್ಗೆಯಿಂದ ಏಕಾಏಕಿ ಮಳೆ ಹೆಚ್ಚಾದ ಕಾರಣ ಹಳ್ಳದ ನೀರಿನಲ್ಲಿ ಏರಿಕೆಯಾಗಿದೆ. ಹೀಗಾಗಿ ಸ್ಥಳೀಯರು ಕರೆ ಮಾಡಿ ಹೇಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ನವೀನ್, ಕುರಿ ಹಾಗೂ ಕುರಿಗಾಯಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಿದರು. ಈ ವೇಳೆ ನವಲಗುಂದ ಪೊಲೀಸರು ಸಹ ತಾಲೂಕು ಆಡಳಿತಕ್ಕೆ ಸ್ಥಳದಲ್ಲಿ ಕುರಿ ರಕ್ಷಣೆಗೆ ಸಹಾಯ ಮಾಡಿದರು.