ಹಾವೇರಿ: ಜಿಲ್ಲೆಯ ಗ್ರಾಮದಲ್ಲಿ ಯಾರೇ ನಿಧನ ಹೊಂದಿದರೂ ಅವರನ್ನು ಗ್ರಾಮದ ಬಳಿ ಎರಡು ಎಕರೆ ಜಮೀನಿನಲ್ಲಿರುವ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿಕೊಂಡು ಬರಲಾಗುತ್ತಿತ್ತು. ಆದರೆ ಇಂದು ಮೃತ ಮಹಿಳೆಯೊಬ್ಬರನ್ನು ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲು ಗ್ರಾಮದ ವ್ಯಕ್ತಿಯೋರ್ವ ಅಡ್ಡಿಪಡಿಸಿದ ಕಾರಣಕ್ಕೆ ಪಂಚಾಯತ್ ಮುಂದೆ ಶವ ಸುಡಲು ಮೃತಳ ಕುಂಟುಂಬದವರು ಮುಂದಾಗಿರುವ ಘಟನೆ ರಾಣೆಬೆನ್ನೂರು ತಾಲೂಕಿನ ಹರನಗಿರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹನುಮವ್ವ ಅಣ್ಣಿಗೇರಿ(45) ಎಂಬವರು ಇಂದು ಮೃತಪಟ್ಟಿದ್ದರು. ಬಳಿಕ ಅಂತ್ಯಸಂಸ್ಕಾರಕ್ಕೆ ಮೃತಳ ಸಂಬಂಧಿಕರು ಸಿದ್ಧತೆ ಮಾಡಲು ಸ್ಮಶಾನಕ್ಕೆ ಕಟ್ಟಿಗೆ ತಗೆದುಕೊಂಡು ಹೋಗುತ್ತಿದ್ದರು. ಆಗ ವ್ಯಕ್ತಿಯೋರ್ವ ಮೃತಳ ಕುಟುಂಬದವರಿಗೆ ಅಡ್ಡಿಪಡಿಸಿದ್ದಾರೆ. ಅಲ್ಲದೆ ಸ್ಮಶಾನ ನಮ್ಮ ಹೆಸರಿನಲ್ಲಿದೆ, ನೀವು ಇಲ್ಲಿ ಅಂತ್ಯಸಂಸ್ಕಾರ ಮಾಡಬಾರದು ಎಂದು ತಡೆಯೊಡ್ಡಿದ್ದಾರೆ. ಇದರಿಂದ ಕಂಗಾಲಾದ ಮೃತಳ ಕುಟುಂಬಸ್ಥರು ಗ್ರಾಮ ಪಂಚಾಯತ್ ಮುಂದೆ ಅಂತ್ಯಸಂಸ್ಕಾರ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ – ಬಯಲಾಯ್ತು ಮರ್ಡರ್ ರಹಸ್ಯ
ಹನುಮವ್ವ ಅಣ್ಣಿಗೇರಿಯ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು ಸಿದ್ಧತೆ ಮಾಡುತ್ತಿರುವ ವಿಷಯ ತಿಳಿದ ಗ್ರಾಮದ ವ್ಯಕ್ತಿಯೊಬ್ಬ ದಾರಿಗೆ ದೊಡ್ಡದಾದ ಗುಂಡಿ ತೋಡಿ, ಗುಂಡಿಗೆ ನೀರು ತುಂಬಿಸಿ ಅಡ್ಡಿ ಮಾಡಿದ್ದಾನೆ. ಹೀಗಾಗಿ ಮೃತಳ ಕುಟುಂಬದವರು ಗ್ರಾಮ ಪಂಚಾಯತ್ ಕಚೇರಿ ಮುಂದೆ ಕಟ್ಟಿಗೆ ಇಟ್ಟು ಅಂತ್ಯಸಂಸ್ಕಾರ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಹಾಗೂ ಪೋಲಿಸರು ಮೃತಳ ಕುಟುಂಬಸ್ಥರು ಹಾಗೂ ಅಡ್ಡಿಪಡಿಸಿದ ವ್ಯಕ್ತಿಗೆ ಪಂಚಾಯತ್ ಮುಂದೆ ಅಂತ್ಯಸಂಸ್ಕಾರ ಮಾಡದಂತೆ ಮತ್ತು ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡುವಂತೆ ಮನವೊಲಿಸಿದ್ದಾರೆ.