ಬೆಂಗಳೂರು: ಕೊರೊನಾ ಸೋಂಕಿತರ ಟ್ರಾವೆಲ್ ಹಿಸ್ಟರಿಯನ್ನು ರಾಜ್ಯ ಸರ್ಕಾರ ಇಂದು ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಅಲ್ಲಿ ನಮೂದಿಸದೇ ಇರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಇಷ್ಟು ದಿನ ಕೊರೊನಾ ವಿಚಾರವಾಗಿ ದಿನಕ್ಕೆ ಎರಡು ಬುಲೆಟಿನ್ ಬಿಡುಗಡೆ ಮಾಡುತ್ತಿದ್ದ ರಾಜ್ಯ ಆರೋಗ್ಯ ಇಲಾಖೆ, ಅದರಲ್ಲಿ ಸೋಂಕಿತರ ಜಿಲ್ಲೆ ಮತ್ತು ಅವರು ಪ್ರಯಾಣ ಮಾಡಿದ ಹಿನ್ನೆಲೆ ಮತ್ತು ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿಯನ್ನು ನಮೂದಿಸುತ್ತಿತ್ತು. ಆದರೆ ಇಂದು ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಕೇವಲ ಜಿಲ್ಲಾವಾರು ಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಈ ಮೂಲಕ ಸೋಂಕಿತರ ಪ್ರಯಾಣದ ಹಿನ್ನೆಲೆಯನ್ನು ಮುಚ್ಚಿಟ್ಟಿದೆ.
ಸದ್ಯ ಕರುನಾಡಲ್ಲಿ ಮುಂಬೈ ಕೊರೊನಾ ಬಾಂಬ್ ಸ್ಫೋಟಿಸಿದೆ. ಮುಂಬೈನಿಂದ ರಾಜ್ಯಕ್ಕೆ ವಾಪಸ್ ಬಂದ ಹಲವರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಇದರಲ್ಲಿ ಕೆಲವರನ್ನು ಮಾತ್ರ ಕ್ವಾರಂಟೈನ್ ಮಾಡಿದ್ದು, ದಾಖಲೆ ಸಲ್ಲಿಸದೇ ಕಳ್ಳಮಾರ್ಗದಲ್ಲಿ ರಾಜ್ಯಕ್ಕೆ ಬಂದವರ ಮಾಹಿತಿ ಸರ್ಕಾರದ ಬಳಿ ಇಲ್ಲ. ಜೊತೆಗೆ ಕೊರೊನಾ ಟೆಸ್ಟ್ ಮಾಡದೇ ಮಹಾರಾಷ್ಟ್ರದಿಂದ ಜನರನ್ನು ರಾಜ್ಯಕ್ಕೆ ಕರೆದುಕೊಂಡು ಬಂದು ಸರ್ಕಾರ ಎಡವಟ್ಟು ಮಾಡಿಕೊಂಡಿದೆ.
ಈ ವಿಚಾರವಾಗಿ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ಹೊರರಾಜ್ಯದಿಂದ ದಾಖಲೆ ನೀಡಿ, ನೋಂದಣಿ ಮಾಡಿಸಿಕೊಂಡು ರಾಜ್ಯಕ್ಕೆ ಬಂದವರ ಟ್ರಾವೆಲ್ ಹಿಸ್ಟರಿ ನಮಗೆ ಸಿಕ್ಕಿದೆ. ಆದರೆ ಯಾವುದೇ ದಾಖಲಾತಿ ಮಾಡಿಕೊಳ್ಳದೆ, ನಮಗೆ ತಿಳಿಸದೇ ರಾಜ್ಯಕ್ಕೆ ಬಂದವರ ಪ್ರಯಾಣದ ಹಿನ್ನೆಲೆ ನಮಗೆ ಸಿಕ್ಕಿಲ್ಲ. ಅದೂ ಸ್ವಲ್ಪ ಕಷ್ಟವಾಗುತ್ತಿದೆ. ನಾವು ಅವರ ಟ್ರಾವೆಲ್ ಹಿಸ್ಟರಿ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿ ನುಣುಚಿಕೊಂಡಿದ್ದಾರೆ.