– ಯುವತಿಯನ್ನ ಮನೆಗೆ ಸೇರಿಸಿಕೊಳ್ಳದ ಕುಟುಂಬಸ್ಥರು
– ಆತ್ಮಹತ್ಯೆಗೆ ಮುಂದಾಗಿದ್ದ ಸಂತ್ರಸ್ತೆಯ ರಕ್ಷಣೆ
ಲಕ್ನೋ: ಉತ್ತರ ಪ್ರದೇಶದಲ್ಲಿ ದಿನೇ ದಿನೇ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ಹುಟ್ಟುಹಬ್ಬದ ಪಾರ್ಟಿಗೆಂದು ಕರೆದು 23 ವರ್ಷದ ಯುವತಿಯ ಮೇಲೆ ಇಬ್ಬರು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ.
ಸಂತ್ರಸ್ತೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಸಂತ್ರಸ್ತೆಯನ್ನು ತನ್ನ ಕುಟುಂಬದವರು ಮನೆಗೆ ಸೇರಿಸದ ಕಾರಣ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಳು. ಅಷ್ಟರಲ್ಲಿ ಆಕೆಯ ಸ್ನೇಹಿತ ಬಂದು ಕಾಪಾಡಿದ್ದಾನೆ.
- Advertisement 2
- Advertisement 3
ಏನಿದು ಪ್ರಕರಣ?
ಸಂತ್ರಸ್ತೆಯ ನೆರೆಹೊರೆಯ ಹುಡುಗಿಯೊಬ್ಬಳು ತನ್ನ ಸಹೋದರ ಅಶಿಶ್ ಹುಟ್ಟುಹಬ್ಬದ ಪಾರ್ಟಿಗೆ ಕರೆದಿದ್ದಳು. ಆಕೆಯ ತಂದೆ ಇನ್ಸ್ಪೆಕ್ಟರ್ ಆಗಿದ್ದರು. ನಂತರ ಸಂತ್ರಸ್ತೆ ಪಾರ್ಟಿಗೆಂದು ಹೋಟೆಲ್ ರೂಮಿಗೆ ಹೋಗಿದ್ದಾಳೆ. ಅಲ್ಲಿ ಆಶಿಶ್ ತನ್ನ ಸ್ನೇಹಿತ ಅಭಿಷೇಕ್ ಜೊತೆ ರೂಮಿನಲ್ಲಿದ್ದನು. ಇವರಿಬ್ಬರು ಸ್ವಲ್ಪ ಸಮಯದವರೆಗೆ ಸಂತ್ರಸ್ತೆ ಜೊತೆ ಮಾತನಾಡಿದ್ದಾರೆ. ನಂತರ ಆಕೆಗೆ ನಿದ್ದೆ ಬರುವ ಔಷಧಿ ಮಿಕ್ಸ್ ಮಾಡಿ, ಕುಡಿಯಲು ಜ್ಯೂಸ್ ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
- Advertisement 4
ಸಂತ್ರಸ್ತೆ ಪಾನೀಯವನ್ನು ಕುಡಿದ ತಕ್ಷಣ ಪ್ರಜ್ಞೆ ಕಳೆದುಕೊಂಡಿದ್ದು, ಈ ವೇಳೆ ಇಬ್ಬರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಸಂತ್ರಸ್ತೆ ಎಚ್ಚರಗೊಂಡು ಅತ್ಯಾಚಾರಕ್ಕೊಳಗಾಗಿರುವ ಬಗ್ಗೆ ತಿಳಿದುಕೊಂಡಿದ್ದಾಳೆ. ಘಟನೆಯ ನಂತರ ಸಂತ್ರಸ್ತೆ ತನ್ನ ಮನೆಗೆ ಹೋಗಿದ್ದಾಳೆ. ಆದರೆ ಆಕೆಯ ಕುಟುಂಬದವರು ಅವಳಿಗೆ ಬೈದು, ಮನೆಯೊಳಗೆ ಬರಬಾರದೆಂದು ಹೇಳಿದ್ದಾರೆ. ಇದರಿಂದ ಬೇಸರಗೊಂಡ ಸಂತ್ರಸ್ತೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಳು.
ಅದರಂತೆಯೇ ಸಮೀಪದ ರೈಲ್ವೆ ನಿಲ್ದಾಣಕ್ಕೆ ಸಂತ್ರಸ್ತೆ ಹೋಗಿದ್ದಾಳೆ. ಅಷ್ಟರಲ್ಲಿ ಸಂತ್ರಸ್ತೆ ಸ್ನೇಹಿತರೊಬ್ಬರು ನಡೆದ ಘಟನೆ ಬಗ್ಗೆ ತಿಳಿದುಕೊಂಡು ಕೂಡಲೇ ಸ್ಥಳಕ್ಕೆ ಧಾವಿಸಿ ಸಂತ್ರಸ್ತೆಯನ್ನು ಕಾಪಾಡಿದ್ದಾರೆ. ನಂತರ ಇಬ್ಬರು ಬಾರ್ರಾ ಪೊಲೀಸ್ ಠಾಣೆಗೆ ಬಂದು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಆರೋಪಿಗಳಾದ ಆಶಿಶ್ ಮತ್ತು ಆತನ ಸ್ನೇಹಿತ ಅಭಿಷೇಕ್ ಇಬ್ಬರನ್ನು ಬಂಧಿಸಲಾಗಿದೆ. ಸದ್ಯಕ್ಕೆ ಸಂತ್ರಸ್ತೆ ಹೇಳಿಕೆಯ ನಂತರ ಹುಟ್ಟುಹಬ್ಬದ ಪಾರ್ಟಿ ಇದೆ ಎಂದು ಆಮಿಷವೊಡ್ಡಿದ್ದ ಹುಡುಗಿಯ ವಿರುದ್ಧ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ‘ಎಂದು ಇನ್ಸ್ಪೆಕ್ಟರ್ ಹರ್ಮೀತ್ ಸಿಂಗ್ ತಿಳಿಸಿದ್ದಾರೆ.