– ನನ್ನ ಕುಟುಂಬ ವರ್ಗಕ್ಕೆ ನೋವು ತಂದಿದೆ
ಬೆಂಗಳೂರು: ಖ್ಯಾತ ನಿರೂಪಕಿ, ನಟಿ ಅನುಶ್ರೀಗೆ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಈ ಕುರಿತು ಅನುಶ್ರೀ ಕೂಡ ಸ್ಪಷ್ಟನೆ ಕೊಟ್ಟಿದ್ದಾರೆ. ಇದೀಗ ಮಾಧ್ಯಮಗಳಲ್ಲಿ ಅನುಶ್ರೀ ಮನವಿವೊಂದನ್ನು ಮಾಡಿಕೊಂಡಿದ್ದಾರೆ.
ನಟಿ ಅನುಶ್ರೀ ಒಂದು ಪತ್ರವನ್ನು ಬರೆದು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸಿಸಿಬಿ ನೋಟಿಸ್ ಸ್ವೀಕರಿಸಿದ ಅನುಶ್ರೀ- ಶನಿವಾರ ವಿಚಾರಣೆಗೆ ಹಾಜರು
ಪತ್ರದಲ್ಲಿ ಏನಿದೆ?
ಗುರುವಾರ ಸಂಜೆ ನನಗೆ ಮಂಗಳೂರಿನಲ್ಲಿ ಸಿಸಿಬಿ ಕಚೇರಿಯಿಂದ ವಿಚಾರಣೆಗೆ ಹಾಜರಾಗಲು ಒಂದು ನೋಟಿಸ್ ಜಾರಿ ಮಾಡಿದ್ದಾರೆ. ಹೀಗಾಗಿ ಇಂದು ಬೆಳಗ್ಗೆ 11 ಗಂಟೆಗೆ ನಾನು ಸ್ವತಃ ಮಂಗಳೂರಿಗೆ ತೆರಳಿ ಆ ವಿಚಾರಣೆಗೆ ಖುದ್ದಾಗಿ ಹಾಜರಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಇದು ಬರೀ ವಿಚಾರಣೆಯ ಸೂಚನೆಯಾಗಿದ್ದು, ಮಾಧ್ಯಮಗಳಲ್ಲಿ ನಾನು ನಟಿಸಿದ ಚಿತ್ರವೊಂದನ್ನು ಬಳಸಿ ನನ್ನನ್ನು ಅಪರಾಧಿ ಎಂಬಂತೆ ತೋರಿಸುವ ಪ್ರಯತ್ನಗಳು ನಡೆಯುತ್ತಿವೆ. ಮಾಧ್ಯಮ ಮಿತ್ರರಲ್ಲಿ ನನ್ನ ಕೋರಿಕೆ ಇಷ್ಟೆ, ಪ್ರಸ್ತುತ ಚರ್ಚೆಯಾಗುತ್ತಿರುವ ಪ್ರಕರಣದಲ್ಲಿ ನನ್ನ ಪಾತ್ರವೇನೂ ಇಲ್ಲ. ವಿಚಾರಣೆಗೆ ಕರೆದ ಕೂಡಲೇ ನಾನು ಅಪರಾಧಿ ಎಂದಲ್ಲ ಎಂದು ನಮಗೆ ತಿಳಿದಿದೆ ಎಂದರು.
ಪೊಲೀಸರಿಗೆ ನನಗೆ ತಿಳಿದಿರುವ ಮಾಹಿತಿ ನೀಡಿ ಸಂಪೂರ್ಣ ಸಹಕಾರ ನೀಡುತ್ತೇನೆ. ಮಾಧ್ಯಮಗಳು ಈ ವಿಚಾರವನ್ನು ಕುರಿತಂತೆ ಯಾವುದೇ ನಿಲುವನ್ನು ಕೊಳ್ಳದಿರಿ ಎನ್ನುವುದು ನನ್ನ ಕಳಕಳಿಯ ಮನವಿ. ಈ ವಿಚಾರ ನನ್ನ ಕುಟುಂಬ ವರ್ಗಕ್ಕೆ ಈಗಾಗಲೇ ನೋವು ತಂದಿದೆ. ಮಾಧ್ಯಮಗಳಲ್ಲಿ ಅತಿಯಾದ ಪ್ರಚಾರವು ಸತ್ಯವನ್ನು ದಾರಿ ತಪ್ಪಿಸುವುದಾಗಬಾರದು ಎನ್ನವುದು ನನ್ನ ಕಾಳಜಿ. ಆದ್ದರಿಂದ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಎಲ್ಲರೂ ಅಪರಾಧಿಗಳಲ್ಲ ಎನ್ನುವುದು ತಮಗೂ ತಿಳಿದಿದೆ. ಆದ್ದರಿಂದ ಈ ವಿಚಾರ ಕುರಿತಂತೆ ಸಮತೋಲನದ ವರದಿಗಳನ್ನು ನೀಡುವಂತೆ ಕೋರುತ್ತೇನೆ ಎಂದು ಮಾಧ್ಯಮ ಮಿತ್ರರಲ್ಲಿ ಕೇಳಿಕೊಂಡಿದ್ದಾರೆ.
ಪೊಲೀಸರ ವಿಚಾರಣೆ ಆದ ನಂತರ ಮಾಧ್ಯಮಗಳಿಗೆ ನೀಡಬಹುದಾದ ಮಾಹಿತಿಯನ್ನು ನಾನು ನೀಡುತ್ತೇನೆ. ಈ ವಿಚಾರದಲ್ಲಿ ಪೊಲೀಸರಿಗೆ ಸಹಕರಿಸುತ್ತೇನೆ. ಮಾಧ್ಯಮ ಮಿತ್ರರು ಕೂಡ ಸತ್ಯಾಸತ್ಯತೆಗಳು ಹೊರಬರುವವರೆಗೆ ತಾಳ್ಮೆಯಿಂದ ಸಹಕರಿಸಬೇಕಾಗಿ ಎಂದು ನಿರೂಪಕಿ ಅನುಶ್ರೀ ಮನವಿ ಮಾಡಿಕೊಂಡಿದ್ದಾರೆ.
https://www.facebook.com/AnchorAnushree/photos/a.625365900832803/3261962123839821
ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ಡ್ಯಾನ್ಸರ್ ಕಿಶೋರ್ ಶೆಟ್ಟಿ ಪಾರ್ಟಿಗಳಲ್ಲಿ ಖ್ಯಾತ ನಿರೂಪಕಿ ಭಾಗಿಯಾಗುತ್ತಾರೆ ಎಂದು ಹೇಳಿಕೆ ನೀಡಿದ್ದ. ಅಲ್ಲದೇ ಕಿಶೋರ್ ಆಪ್ತ ತರುಣ್ ವಿಚಾರಣೆ ವೇಳೆ ಅನುಶ್ರೀಯವರ ಹೆಸರು ಹೇಳಿದ್ದಾನೆ ಎನ್ನಲಾಗಿದೆ. ಈ ಇಬ್ಬರ ಹೇಳಿಕೆಯನ್ನಾಧರಿಸಿ ಅನುಶ್ರೀ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.