ಬೆಂಗಳೂರು: ಜೂನ್ 11 ರಂದು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ ಕವಿ ಸಿದ್ದಲಿಂಗಯ್ಯ ಅವರನ್ನು ರಾಷ್ಟ್ರಕವಿಯಾಗಿ ಘೋಷಣೆ ಮಾಡುವ ವಿಚಾರವಾಗಿ ನಾನು ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ಚರ್ಚಿಸುತ್ತೇನೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ.
ಆರ್.ಆರ್ ನಗರದ ಸಿದ್ದಲಿಂಗಯ್ಯರ ಬನವಾಸಿ ನಿವಾಸಕ್ಕೆ ಶಾಸಕ ಮುನಿರತ್ನ ಅವರೊಂದಿಗೆ ಭೇಟಿ ನೀಡಿದ ಪ್ರಹ್ಲಾದ್ ಜೋಶಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಕುಟುಂಬದ ಜೊತೆ ಕೆಲ ಹೊತ್ತು ಕುಶಲೋಪರಿ ವಿಚಾರಿಸಿದರು. ಇದೇ ವೇಳೆ ಸಿದ್ದಲಿಂಗಯ್ಯ ಅಭಿಮಾನಿಗಳಿಂದ ಸಿದ್ದಲಿಂಗಯ್ಯರನ್ನು ರಾಷ್ಟ್ರಕವಿ ಎಂದು ಘೋಷಣೆ ಮಾಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದರು. ಇದನ್ನೂ ಓದಿ: ‘ಊರುಕೇರಿ’ ತೊರೆದು ಹೋದ ಸಿದ್ದಲಿಂಗಯ್ಯ
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜೋಶಿ, ಸಿದ್ದಲಿಂಗಯ್ಯನವರು ಬಹಳ ಸಂಕಷ್ಟದಿಂದ, ಬಡತನದ ಹಿನ್ನೆಲೆಯಿಂದ ಬಂದಿದ್ದರು ಸಹ ಸಮಾಜದ ಒಳಿತಿಗಾಗಿ ಶ್ರಮಿಸಿದ್ದರು. ಸಮಾಜದಲ್ಲಿ ತುಳಿತಕ್ಕೆ ಒಳಗಾದ ಸಮುದಾಯವನ್ನು ಮೇಲೆತ್ತಲು ಸಿದ್ದಲಿಂಗಯ್ಯನವರು ಕಾರಣರಾಗಿದ್ದರು. ಸಮಾಜದಲ್ಲಿ ಎಲ್ಲ ವರ್ಗದವರ ಅಭಿಮಾನಗಳಿಸಿದ್ದರು. ಅವರ ನೆನಪಿನಲ್ಲಿ ಒಂದಷ್ಟು ಒಳ್ಳೆಯ ಕೆಲಸ ಮಾಡಲು ನಿರ್ಧಾರಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೂ ಚರ್ಚೆಯಾಗಿದೆ. ಅವರ ನೆನಪಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆಗೆ ಸರ್ಕಾರದಿಂದ ಸ್ಥಳ ಸಹ ಮೀಸಲಿಡಲು ಚರ್ಚೆಯಾಗಿದೆ. ಅಭಿಮಾನಿಗಳ ಇಚ್ಚೆಯಂತೆ ರಾಷ್ಟ್ರ ಕವಿ ಎಂದು ಘೋಷಣೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದರು.