ಕಾರವಾರ: ಅಬ್ಬರದ ಮಳೆಬಂದ್ರೆ ಭೂ ಕುಸಿತವಾಗುತ್ತೆ, ಇದ್ದ ಜಾಗವೇ ಮಾಯವಾಗುತ್ತೆ ಅಂತದ್ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಸುರಿದ ಅಬ್ಬರದ ಮಳೆಯಿಂದ ಅರಬ್ಬೀ ಸಮುದ್ರ ಭಾಗದಲ್ಲಿ ಹತ್ತು ಎಕರೆ ಪ್ರದೇಶದಷ್ಟು ಭೂ ಭಾಗ ಸೃಷ್ಟಿಯಾಗಿದ್ದು ಸಮುದ್ರವೇ ಹಿಂದೆಸರಿದಿದೆ.
ಕಾರವಾರದ ಟಾಗೂರ್ ಕಡಲತಡಿ ನೋಡಲು ಸಾಧಾರಣವಾಗಿ ಕಾಣ್ತಿದೆಯಾದ್ರೂ ಇದರ ಹಿಂದೆ ಇರೋ ಪ್ರಕೃತಿಯ ಕೌತುಕ ಹೊಸ ಸವಾಲುಗಳನ್ನು ಹುಟ್ಟು ಹಾಕುತ್ತಿವೆ. ಕಾಳಿ ನದಿ ಸಂಗಮದ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಮುದ್ರವನ್ನೇ ನುಂಗಿ ಹತ್ತು ಎಕರೆಯಷ್ಟು ಹೊಸ ಭೂಭಾಗ ನಿರ್ಮಾಣವಾಗಿದೆ.
ನದಿಯೊಂದಿಗೆ ಹೆಚ್ಚಿನ ಪ್ರಮಾಣದ ಮರಳು ಕಡಲತಡಿಯನ್ನು ಸೇರುತ್ತಿದೆ. ಇದರಿಂದ ಕಾಳಿ ನದಿ ಪ್ರದೇಶದ ಅಳವೆಗಳು ಮುಚ್ಚಿಹೋಗುವ ಭಯ ಸ್ಥಳೀಯರನ್ನು ಕಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯೇ ಇದಕ್ಕೆ ಕಾರಣ ಎನ್ನಲಾಗ್ತಿದೆ.
ಮರಳಿನ ಭೂಮಿ ನಿರ್ಮಾಣವಾಗಿ ಅರಬ್ಬಿ ಸಮುದ್ರವೇ ಹಿಂದೆ ಸರಿದಿದ್ದು, ಮರಳು ಹೇರಳವಾಗಿ ಸಂಗ್ರಹವಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ನಿರಂತರ ಅಬ್ಬರದ ಮಳೆಯ ಪ್ರಭಾವವೇ ಇದಕ್ಕೆ ಕಾರಣ ಎಂದು ಕಡಲ ಜೀವಶಾಸ್ತ್ರಜ್ಞರಾದ ಡಾ.ಜಗನ್ನಾಥ್ ರಾಥೋಡ್ ಹೇಳುತ್ತಾರೆ.
ಅಕ್ರಮ ಮರಳುಗಾರಿಕೆಯಿಂದ ಸಹ ಕಡಲತಡಿಯಲ್ಲಿ ಮರಳು ಸಂಗ್ರಹವಾಗ್ತಿದೆ ಎಂಬ ಮಾತು ಇದೆ. ಈ ಮಟ್ಟದಲ್ಲಿ ಮರಳು ಸಂಗ್ರಹವಾದರೆ ನದಿಯ ಹರಿಯುವ ದಿಕ್ಕು ಬದಲಾಗಿ ದೊಡ್ಡ ಹಾನಿಯಾಗಬಹುದೆಂಬ ಆತಂಕವೂ ಇದೆ.