ಬೆಂಗಳೂರು: ಅಂತೂ ಇಂತೂ ಸಚಿವ ಆನಂದ್ ಸಿಂಗ್ ಮನವೊಲಿಸುವ ಪ್ರಕ್ರಿಯೆ ಸಫಲವಾಗಿದ್ದು, ಸಮಸ್ಯೆ ಬಗೆ ಹರಿದೆ ಎಂದು ಶಾಸಕ ರಾಜೂ ಗೌಡ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾಧ್ಯಮದವರ ಬಳಿ ಮಾತನಾಡಿದ ಅವರು, ಆನಂದ್ ಸಿಂಗ್ ಅವರು ನನಗೆ ಆತ್ಮೀಯ ಸ್ನೇಹಿತರು, ಅವರ ಹಿತ ಬಯಸುವುದು ನನ್ನ ಕರ್ತವ್ಯ, ಪಕ್ಷದ ಒಬ್ಬ ಕಾರ್ಯಕರ್ತನಾಗಿ ನನಗೆ ನೀಡಿದ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಆನಂದ್ ಸಿಂಗ್ ಅವರನ್ನು ಕರೆ ತಂದು ಬಿ.ಎಸ್.ಯಡಿಯೂರಪ್ಪನವರು ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿಯವರ ಬಳಿ ಮಾತನಾಡಿಸಿದ್ದೇನೆ. ಶೇ.100ರಷ್ಟು ಸಮಸ್ಯೆ ಸುಖಾಂತ್ಯ ಕಂಡಿದೆ. ಅವರು ಆಗಸ್ಟ್ 15ರಂದು ಜಿಲ್ಲೆಯಲ್ಲಿ ಧ್ವಜಾರೋಹಣ ನೆರವೇರಿಸುತ್ತಾರೆ. ಮುಂದೆ ಎಲ್ಲರೂ ಸೇರಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಆನಂದ್ ಸಿಂಗ್ – ಸಿಎಂ ಸಂಧಾನ ಸಭೆ ಸಕ್ಸಸ್
ಸದ್ಯಕ್ಕೆ ಗೊಂದಲ ಏನೂ ಇಲ್ಲ, ಕೆಲವನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಹೈ ಕಮಾಂಡ್ ತೀರ್ಮಾನ ಮಾಡುತ್ತದೆ. ಅದಕ್ಕೆ ಆನಂದ್ ಸಿಂಗ್, ಆರ್.ಅಶೋಕ್, ನಾನು ಸೇರಿ ಎಲ್ಲರೂ ಬದ್ಧರಿರುತ್ತೇವೆ. ಬಿಜೆಪಿಯ ಎಲ್ಲ ಕಾರ್ಯಕರ್ತರಿಗೂ ಒಳ್ಳೆಯದಾಗುತ್ತದೆ. ಆಗಸ್ಟ್ 15 ರಂದು ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಇದೇ ವೇಳೆ ಆರ್.ಅಶೋಕ್ ತಿಳಿಸಿದರು.