ಹೈದರಾಬಾದ್: ಸಾಮಾನ್ಯವಾಗಿ ಜನರು ಸಾಕು ಪ್ರಾಣಿಗಳನ್ನು ತಮ್ಮ ಮನೆಯ ಸದಸ್ಯರಂತೆ ಭಾವಿಸುತ್ತಾರೆ. ಮನುಷ್ಯರಂತೆ ಅನೇಕ ಮಂದಿ ಪ್ರಾಣಿಗಳೊಂದಿಗೆ ಕೂಡ ಉತ್ತಮ ಪ್ರೀತಿ ಹಾಗೂ ಬಾಂಧವ್ಯವನ್ನು ಹೊಂದಿರುತ್ತಾರೆ. ತಮ್ಮ ನೆಚ್ಚಿನ ಶ್ವಾನ, ಬೆಕ್ಕು ಮತ್ತು ಇತರೆ ಸಾಕು ಪ್ರಾಣಿಗಳು ಸತ್ತಾಗ ದುಃಖ ವ್ಯಕ್ತಪಡಿಸುತ್ತಾರೆ. ಆದರೆ ಆಂಧ್ರ ಪ್ರದೇಶದ ವ್ಯಕ್ತಿಯೊಬ್ಬರು 5 ವರ್ಷಗಳ ಹಿಂದೆ ನಿಧನ ಹೊಂದಿದ ಶ್ವಾನದ ನೆನಪಿಗಾಗಿ ಕಂಚಿನ ಪ್ರತಿಮೆಯನ್ನು ಸ್ಥಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ.
ಹೌದು, ಆಂಧ್ರ ಪ್ರದೇಶದ ಪ್ರಕಾಶ್ ಎಂಬವರು 9 ವರ್ಷಗಳ ಕಾಲ ಶ್ವಾನವನ್ನು ಬಹಳ ಪ್ರೀತಿಯಿಂದ ಸಾಕಿದ್ದರು. ಆದರೆ 5 ವರ್ಷದ ಹಿಂದೆ ಶ್ವಾನ ಮೃತಪಟ್ಟಿದೆ. ಅಂದಿನಿಂದ ಶ್ವಾನದ ಸವಿನೆನಪಿಗಾಗಿ ಪ್ರತಿಮೆಯನ್ನು ಸ್ಥಾಪಿಸಿ ಪ್ರತಿವರ್ಷ ಶ್ವಾನ ಪುಣ್ಯ ಸ್ಮರಣೋತ್ಸವವನ್ನು ಆಚರಿಸುತ್ತಾರೆ.
ಈ ವೇಳೆ ಶ್ವಾನದ ಪ್ರತಿಮೆಗೆ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿ, ಗ್ರಾಮಸ್ಥರಿಗೆ ಊಟವನ್ನು ಆಯೋಜಿಸುತ್ತಾರೆ. ಇದೀಗ ಶ್ವಾನದ ಪ್ರತಿಮೆಗೆ ಪೂಜೆ ಮಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಕುರಿತಂತೆ ಮಾಧ್ಯಮದೊಂದಿಗೆ ಮಾತನಾಡಿದ ಪ್ರಕಾಶ್, ನಾವು ಈ ಪ್ರಾಣಿಯನ್ನು ನಮ್ಮ ಸ್ವಂತ ಮಗುವಿನಂತೆ ಭಾವಿಸಿದ್ದೆವು. ಹಲವಾರು ವರ್ಷಗಳ ಕಾಲ ಬಹಳ ಪ್ರೀತಿಯಿಂದ ಶ್ವಾನವನ್ನು ಸಾಕಿದ್ದೆವು. ಶ್ವಾನ ಜೀವನ ಪೂರ್ತಿ ಸಹಕಾರಿ ಮತ್ತು ನಿಯತ್ತಾಗಿತ್ತು. ಇದೀಗ ಶ್ವಾನದ ಐದನೇ ಪುಣ್ಯಸ್ಮರಣೆಯನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ಶವ ಪತ್ತೆ