ಗದಗ: ಸಾರಿಗೆ ನೌಕರರ ಮುಷ್ಕರದ ಬಿಸಿ ವೃದ್ಧ ವ್ಯಾಪಾರಸ್ಥ ದಂಪತಿಗೂ ತಟ್ಟಿದೆ. ನಗರದ ಪಂಡಿತ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲಿ ವ್ಯಾಪಾರಕ್ಕೆಂದು ಬಂದ ವೃದ್ಧ ದಂಪತಿ ವಾಹನ ಸಿಗದೆ ಪರದಾಡುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ಮೂಲದ ವೃದ್ಧರು ಮರಳಿ ತಮ್ಮೂರಿಗೆ ಹೋಗಲಾಗದೇ 2 ದಿನಗಳಿಂದ ಪರದಾಡುತ್ತಿರುವ ಸ್ಥಿತಿ ಬಗ್ಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸೋಮವಾರದಂದು ಕಸಬಾರಿಗೆ, ಸಣ್ಣಪುಟ್ಟ ಪ್ಲಾಸ್ಟಿಕ್ ವಸ್ತುಗಳ ವ್ಯಾಪಾರಕ್ಕೆಂದು ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಬಂದಿದ್ದರು. ನಿನ್ನೆಯೇ ಇಳಕಲ್ ಗೆ ಹೋಗಬೇಕಿತ್ತು. ಆದರೆ 2 ದಿನಗಳಿಂದ ಬಸ್ ಇಲ್ಲದಕ್ಕೆ ಇಳಕಲ್ ಹೋಗಲಾಗದೇ ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದಾರೆ.
ಖಾಸಗಿ ವಾಹನಗಳ ದುಪ್ಪಟ್ಟು ಹಣಕ್ಕೆ ಬೇಸತ್ತಿದ್ದಾರೆ. ಗದಗದಿಂದ ಗಜೇಂದ್ರಗಡಕ್ಕೆ 300 ರೂಪಾಯಿ ಹಣ ಕೇಳುತ್ತಿದ್ದಾರೆ. ಗಜೇಂದ್ರಗಡದಿಂದ ಮುಂದೆ ಇಳಕಲ್ ಗೆ ಹೋಗಬೇಕು. ಅಲ್ಲಿ ಎಷ್ಟು ಹಣ ಕೇಳುತ್ತಾರೋ ಗೊತ್ತಿಲ್ಲ. ಹೀಗಾದರೆ ಏನು ಮಾಡೋದು ಎಂದು ಸರ್ಕಾರ ಹಾಗೂ ಸಾರಿಗೆ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ಲಾಕ್ಡೌನ್, ಬೆಲೆ ಏರಿಕೆ ಮಧ್ಯೆ ದುಡಿದ ಹಣ ಖಾಸಗಿ ವಾಹನಕ್ಕೆ ಕೊಡುವ ಸ್ಥಿತಿ ಬಂತಲ್ಲಾ ಅಂತ ಗೋಳಾಡಿದರು.