ಬೆಂಗಳೂರು: ದೇಶದ ದೊಡ್ಡ ಹಬ್ಬ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲು ಸಿಲಿಕಾನ್ ಸಿಟಿಯಲ್ಲಿ ಭರದ ಸಿದ್ಧತೆ ನಡೆಸಲಾಗುತ್ತಿದೆ.
ಕೊರೊನಾ ಸಂಕಷ್ಟ ನಡುವೆಯೂ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಮಾರ್ಕೆಟ್ಗೆ ಜನರು ಮುಗಿಬಿದಿದ್ದಾರೆ. ನಗರದ ಮೈಸೂರು ರಸ್ತೆಯ ಫ್ಲೈ ಓವರ್ ಕೆಳಭಾಗದ ಮಾರ್ಕೆಟ್, ಗಾಂಧಿ ಬಜಾರ್ ಮಾರುಕಟ್ಟೆ, ಲಾಲ್ ಬಾಗ್ ಗಣೇಶ ದೇವಾಲಯ ಬಳಿಯ ಮಿನಿ ಹೂವಿನ ಮಾರುಕಟ್ಟೆ, ಆನೇಕಲ್ ಮಾರುಕಟ್ಟೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಜನರು ಹಬ್ಬದ ವಸ್ತುಗಳ ಖರೀದಿಗೆ ಮುಗಿಬಿದ್ದರು.
ಕೊರೊನಾ ಸೋಂಕು ಹರಡುವ ಆತಂಕದ ನಡುವೆಯೂ ಹಲವರು ಯಾವುದೇ ಮುನ್ನೆಚ್ಚರಿಕೆ ವಹಿಸದೆ ಖರೀದಿಗೆ ಮುಂದಾಗಿದ್ದು ಸಾಮಾನ್ಯ ದೃಶ್ಯವಾಗಿತ್ತು. ಹೂವು, ಬಾಳೆ-ಮಾವಿನ ಎಲೆ ಜೊತೆಗೆ ಹಣ್ಣುಗಳನ್ನು ಖರೀದಿ ಮಾಡಲು ಜನರು ಮುಂದಾಗಿದ್ದರು. ಮಾರ್ಕೆಟ್ ಪ್ರದೇಶದ ಹಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಕಂಡು ಬಂದಿತ್ತು.
ಕೊರೊನಾ ಹಿನ್ನೆಲೆಯಲ್ಲಿ ಖರೀದಾರರ ಸಂಖ್ಯೆ ಕಡಿಮೆ ಇದ್ದರು ಹೂವು, ಹಣ್ಣು ದರದಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ತಾವರೆ ಹೂ 100 ರೂ., ಬಾಳೆಕಂದು 60 ರೂ., ಮಲ್ಲಿಗೆ ಕೆಜಿ 800 ರೂ ರೂ., ಕನಕಾಂಬರ ಹೂ ಕೆಜಿಗೆ 2500 ರೂ., ಗುಲಾಬಿ ಹೂ ಕೆಜಿಗೆ 350 ರೂ. ದರದಲ್ಲಿ ಮಾರಾಟವಾಗುತ್ತಿತ್ತು.
ಉಳಿದಂತೆ ನಾಳೆ ಹಬ್ಬದ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಸೇವೆ ಮಾಡಿಸಲು ಅವಕಾಶವಿಲ್ಲ ಎನ್ನಲಾಗಿದೆ. ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಲಭಿಸಲಿದೆ.