ರಾಯಚೂರು: ರಾಜ್ಯದ ಕೆಲವು ಹಿರಿಯ ನಾಯಕರ ನಿರ್ಣಯದಿಂದ ನನಗೆ ಅನ್ಯಾಯವಾಗಿದೆ. ಸಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ ಅಂತ ದೇವದುರ್ಗ ಶಾಸಕ ಶಿವನಗೌಡ ನಾಯಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನಗಾದ ಅನ್ಯಾಯಕ್ಕೆ ಪಕ್ಷದ ಚೌಕಟ್ಟಿನಲ್ಲಿ ಹೋರಾಟವನ್ನ ಮಾಡುತ್ತೇನೆ ಎಂದಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ನಾಯಕರಿಂದ ಸ್ಥಾನಮಾನ ಸಿಕ್ಕಿತ್ತು. ಆದರೆ ರಾಜ್ಯದ ಕೆಲ ಹಿರಿಯ ನಾಯಕರು ಬೇಕಂತಲೇ ಸ್ಥಾನಮಾನ ತಪ್ಪಿಸಿದ್ದಾರೆ. ಹಿರಿಯ ನಾಯಕರ ತುಳಿತಕ್ಕೊಳಗಾಗಿದ್ದೇನೆ. ಪರಿಶಿಷ್ಟ ಪಂಗಡದವನಾದ ನನಗೆ ದೊಡ್ಡ ಅನ್ಯಾಯವಾಗಿದೆ. ಪರಿಶಿಷ್ಟ ಪಂಗಡದವರು ಹಲವು ಶಾಸಕರಿದ್ದಾರೆ. ಕನಿಷ್ಠ ಮೂವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಸಾಮಾಜಿಕ ನ್ಯಾಯ ಸಿಕ್ಕಿಲ್ಲ, ಹದಿಮೂರು ಜಿಲ್ಲೆಗೆ ಅನ್ಯಾಯವಾಗಿದೆ ಎಂದರು. ಇದನ್ನೂ ಓದಿ: ಆಡಳಿತ ಪಕ್ಷದ ವಿರುದ್ಧವೇ ಧರಣಿ ಕುಳಿತ ಬಿಜೆಪಿ ಶಾಸಕ ಕುಮಾರಸ್ವಾಮಿ
ಸಿಎಂ ಬಸವರಾಜ್ ಬೊಮ್ಮಾಯಿವರು ಮುಂದೆಯೂ ಮುಖ್ಯಮಂತ್ರಿಯಾಗಲಿದ್ದಾರೆ. ನಮಗೆ ಬೊಮ್ಮಾಯಿ ನ್ಯಾಯ ಒದಗಿಸಬೇಕು. ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನಕೊಟ್ಟರೆ ನಮ್ಮ ಸಮಾಜಕ್ಕೆ ಸಚಿವ ಸ್ಥಾನ ಕೊಟ್ಟ ಹಾಗೆ ಆಗುವುದಿಲ್ಲ. ಸರ್ಕಾರ ರಚನೆಗೆ ಅವರ ಶ್ರಮ ಪರಿಗಣಿಸಿ ಕೊಟ್ಟಂತಾಗುತ್ತದೆ ಸಮಾಜಕ್ಕೆ ನ್ಯಾಯ ಸಿಕ್ಕಂತಾಗುವುದಿಲ್ಲ ಅಂತ ಶಿವನಗೌಡ ನಾಯಕ್ ಬೇಸರ ಹೊರಹಾಕಿದ್ದಾರೆ.