ಕೊಪ್ಪಳ: ಇಲ್ಲಿನ ಗಂಗಾವತಿ ತಾಲೂಕಿನ ಸಂಗಾಪೂರ ಗ್ರಾಮದ ಹೊರ ವಲಯದ ಮಾವಿನ ತೋಟದಲ್ಲಿ ಯುವಕನೊಬ್ಬನ ಕೊಲೆ ನಡೆದಿದೆ.
ಕೊಲೆಯಾದ ಯುವಕನನ್ನು ಸಂಗಾಪೂರ ಗ್ರಾಮದ ಹನುಮೇಶ ಬೋವಿ (22) ಎಂದು ಗುರುತಿಸಲಾಗಿದೆ. ಕೊಲೆಯಾಗಿರುವ ಹನುಮೇಶ ಕಳೆದ ಮೂರು ವರ್ಷಗಳಿಂದ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ, ಯುವತಿ ಮನೆಯವರಿಗೆ ಪ್ರೀತಿ ವಿಷಯ ತಿಳಿದು ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದೆ. ಯುವತಿಯನ್ನು ಬೇರೆ ಹುಡುಗನ ಜೊತೆಗೆ ಮದುವೆ ಮಾಡಲು ಯುವತಿ ಕಡೆಯವರು ನಿರ್ಧಾರ ಮಾಡಿದ್ದರು.
ಮಾಹಿತಿ ತಿಳಿದ ಯುವಕ, ಯುವತಿ ಊರು ಬಿಟ್ಟು ಹೋಗಲು ಕೂಡ ನಿರ್ಧಾರ ಮಾಡಿದ್ದರು. ಯುವತಿ ಕುಟುಂಬದವರು ಅವಸರದಲ್ಲಿ ಯುವತಿ ಮದುವೆಗೆ ನಿಶ್ಚಿತಾರ್ಥ ಸಿದ್ಧಪಡಿಸಿಕೊಂಡಿದ್ದರು. ಇಂದು ಯುವತಿ ಮನೆಯಲ್ಲಿ ನಿಶ್ಚಿತಾರ್ಥ ತಯಾರಿ ನಡೆಸಿದ್ದರು. ಕಾರ್ಯಕ್ರಮಕ್ಕೆ ಯುವಕ ಅಡ್ಡಿಪಡಿಸಬಹುದು ಎನ್ನುವ ಮಾಹಿತಿಯಿಂದ ಯುವತಿ ಕಡೆಯವರು ಯುವಕನನ್ನು ಕೊಲೆ ಮಾಡಿದ್ದಾರೆ ಎಂದು ಯುವಕನ ಕಡೆಯವರು ಆರೋಪ ಮಾಡುತ್ತಿದ್ದಾರೆ.
ಪೊಲೀಸ್ ಇಲಾಖೆಯವರು ಸ್ಥಳಕ್ಕೆ ಭೇಟಿಯನ್ನು ನೀಡಿದ್ದು, ಕೊಲೆ ಆಗಿರುವ ಕುರಿತು ಖಚಿತ ಮಾಹಿತಿ ಹೊರಹಾಕಿಲ್ಲ. ಘಟನೆ ಸಂಬಂಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಅವಾಚ್ಯ ಬೈಗುಳಕ್ಕೆ ಶುರುವಾದ ಜಗಳ – ಅತ್ತೆಯನ್ನೇ ಕೊಂದ ಸೊಸೆ