ಉಡುಪಿ: ಇಂಧನ, ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಮೆಸ್ಕಾಂನ ಲೈನ್ ಮ್ಯಾನ್ ಗಳ ಜೊತೆ ಹುಟ್ಟುಹಬ್ಬದ ಸಿಹಿ ಊಟವನ್ನು ಸವಿದು ಖುಷಿಪಟ್ಟಿದ್ದಾರೆ.
ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ಕುಮಾರ್ ಈ ಬಾರಿ ಕ್ಯಾಬಿನೆಟ್ ದರ್ಜೆಯ ನೂತನ ಸಚಿವರಾಗಿ ಎರಡು ಇಲಾಖೆಗಳ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸ್ವಾತಂತ್ರೋತ್ಸವವಾದ ಇಂದೇ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಮೆಸ್ಕಾಂನ ಸಿಬ್ಬಂದಿ ಜೊತೆ ಸಿಹಿಯೂಟ ಮಾಡಿದರು. ಈ ಮೂಲಕ 47ನೇ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದರು.
ಲೈನ್ ಮ್ಯಾನ್ ಗಳ ಜೊತೆ ಮನೆಯಂಗಳದಲ್ಲಿ ಕೂತು ಊಟ ಮಾಡಿದರು. ಊಟದ ಜೊತೆ ತಮ್ಮ ಇಲಾಖೆಯಲ್ಲಿರುವ ಸಮಸ್ಯೆಗಳು, ನಿಮ್ಮ ಬೇಡಿಕೆಗಳು ಏನು ಎಂದು ಲೈನ್ಮ್ಯಾನ್ಗಳನ್ನು ಕೇಳಿದರು. ಈ ಪೈಕಿ ಸಾಧ್ಯವಾದಷ್ಟನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವ ಸುನೀಲ್ ಕುಮಾರ್, ನನ್ನ ಇಲಾಖೆ ಸರಿಯಾಗಿ ಕಾರ್ಯ ನಿರ್ವಹಿಸಬೇಕಾದರೆ ಫೀಲ್ಡಿನಲ್ಲಿ ದುಡಿಯುವ ಮೆಸ್ಕಾಂನ ಸಿಬ್ಬಂದಿ ಬಹುಮುಖ್ಯ. ಅವರ ಜೊತೆ ಹುಟ್ಟುಹಬ್ಬದ ದಿನ ಊಟ ಮಾಡುತ್ತಾ ಸಮಸ್ಯೆ ಆಲಿಸಿದ್ದೇನೆ. ಅದೇ ಇಂದಿನ ವಿಶೇಷ ಎಂದರು.