ಹುಬ್ಬಳ್ಳಿ: ಆನ್ಲೈನ್, ಎಸ್ಎಂಎಸ್ ಹಾಗೂ ಪತ್ರಿಕೆ ಮೂಲಕ ಜಾಹೀರಾತು ನೀಡಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ನಂಬಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸೈಬರ್ ಕ್ರೈಂ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಳೇ ಹುಬ್ಬಳ್ಳಿಯ ನಿವಾಸಿಗಳಾದ ಬಸವಾರಾಜ ಲಮಾಣಿ, ಮಹಾಂತೇಶ ಚವ್ಹಾಣ್ ಮತ್ತು ಅರ್ಜುನ ಲಮಾಣಿ ಬಂಧಿತ ಆರೋಪಿಗಳು. ಬಂಧಿತರಿಂದ 30 ಗ್ರಾಂ ಬಂಗಾರ, ಏಳು ಸ್ಮಾರ್ಟ್ ಫೋನ್, ಎಂಟು ಕೀ ಪ್ಯಾಡ್ ಮೊಬೈಲ್, ಎರಡು ದ್ವಿಚಕ್ರ ವಾಹನ ಹಾಗೂ 1.57 ಲಕ್ಷ ನಗದು ಸೇರಿದಂತೆ ಒಟ್ಟು 4.97 ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ.
ಧಾರವಾಡದ ಉದ್ಯಮಿ ದ್ಯಾಮನಗೌಡ ಪಾಟೀಲ ಅವರು ಪ್ರಧಾನಮಂತ್ರಿ ಕೌಶಲ ಅಭಿವೃದ್ಧಿ ಯೋಜನೆಯಡಿ ಸಾಲಕ್ಕಾಗಿ ಆನ್ಲೈನ್ನಲ್ಲಿ ಅರ್ಜಿ ಹಾಕಿದ್ದರು. ಇವರ ಮಾಹಿತಿ ಪಡೆದ ವಂಚಕನೊಬ್ಬ, ಹೇಮಂತ್ ಕುಮಾರ್ ಹೆಸರಿನಲ್ಲಿ ಪರಿಚಯ ಮಾಡಿಕೊಂಡು ಪ್ರಧಾನಮಂತ್ರಿ ಕೌಶಲ ಅಭಿವೃದ್ಧಿ ಯೋಜನೆಯ ಬೆಂಗಳೂರು ಕಚೇರಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿ, ಶೇ 2ರ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಹೇಳಿದ್ದಾನೆ.
ಸಾಲ ಮಂಜೂರಾತಿಗೆ ಒಪ್ಪಂದ ಪತ್ರ, ವಿಮೆ, ತೆರಿಗೆ ಎಂದು 40 ಸಾವಿರ ಶುಲ್ಕವಾಗುತ್ತದೆ ಎಂದು ದ್ಯಾಮನಗೌಡರಿಂದ 31 ಸಾವಿರ ಆನ್ಲೈನ್ನಲ್ಲಿ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದರು. ಈ ಘಟನೆಯ ಕುರಿತು ಸೈಬರ್ ಠಾಣೆಯಲ್ಲಿ ದಾಖಲಾಗಿತ್ತು.