– ನಡೆದ ಅತಾಚುರ್ಯಕ್ಕೆ ಕ್ಷಮೆ ಕೇಳಿದ ಸಚಿವರು
ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಅವರ ಮೂರ್ತಿಯನ್ನ ಮಾತುಕತೆಯೇ ಮೂಲಕವೇ ತೆರವು ಮಾಡಲಾಗಿದೆ. ಆದ್ರೆ ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ನನಗೂ ಗೊತ್ತಿಲ್ಲ. ಕೂಡಲೇ ವಿಷ್ಣುವರ್ಧನ್ ಅವರ ಅಭಿಮಾನಿಗಳನ್ನ ಕರೆಸಿ ಮಾತನಾಡುತ್ತೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿ.ಸೋಮಣ್ಣ, ನಾನು ನಿನ್ನೆ ಚಿಕ್ಕಮಗಳೂರಿನಲ್ಲಿದ್ದು, ಇಂದು ಮಾತನಾಡುತ್ತೇನೆ. ಶ್ರೀ ಬಾಲಗಂಗಾಧರ ಸ್ವಾಮೀಜಿಗಳ ವೃತ್ತ ಆಗಿರೋದರಿಂದ ಅವರ ಪ್ರತಿಮೆ ಸ್ಥಾಪನೆ ಬಗ್ಗೆ ಚರ್ಚೆ ನಡೆದಿತ್ತು. ಅಲ್ಲಿಯೇ ನಿರ್ಮಾಣವಾಗುತ್ತಿರುವ ಪಾರ್ಕ್ ನಲ್ಲಿ ಅಥವಾ ವಿಜಯನಗರ ಬಸ್ ನಿಲ್ದಾಣದಲ್ಲಿ ವಿಷ್ಣು ಅವರ ಪ್ರತಿಮೆ ಸ್ಥಾಪಿಸುವ ಕುರಿತು ಮಾತುಕತೆ ನಡೆದಿತ್ತು ಎಂದು ಸೋಮಣ್ಣ ಅವರು ತಿಳಿಸಿದರು.
40 ವರ್ಷಗಳ ಹಿಂದೆಯೇ ಬಾಲಗಂಗಾಧರೇಶ್ವರ ವೃತ್ತ ಎಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನಾನು ಮತ್ತು ವಿಷ್ಣುವರ್ಧನ್ ಆತ್ಮೀಯರು. ಆದ್ರೆ ಈ ಪ್ರತಿಮೆ ಏಕೆ ತೆರವು ಆಯ್ತು ಅಂತ ಮಾಹಿತಿ ಇಲ್ಲ. ಆದ್ರೆ ಈ ಪ್ರದೇಶದಲ್ಲಿ ತಿಳಿದೋ ಅಥವಾ ತಿಳಿಯದೋ ಅಲ್ಲಿ ಪ್ರತಿಮೆ ಇರಿಸಲಾಗಿತ್ತು. ಮುಂದಿನ ನಾಲ್ಕೈದು ದಿನಗಳಲ್ಲಿ ಒಳ್ಳೆ ಕಡೆ ಪ್ರತಿಮೆ ಸ್ಥಾಪನೆ ಮಾಡಲಾಗುವುದು ಎಂದರು.
ವಿಷ್ಣುವರ್ಧನ್ ನನಗೆ ಆತ್ಮೀಯರಲ್ಲಿ ಆತ್ಮೀಯರು. ನನ್ನ ಜೊತೆಗಿನ ಅವರ ಒಡನಾಟ ಹೇಗಿತ್ತು ಅನ್ನೋದು ಈಗ ಹೇಳಲು ಸಮಯ ಇಲ್ಲ. ಇದೊಂದು ಸೂಕ್ಷ್ಮ ಘಟನೆಯಾಗಿದ್ದು, ನಡೆದ ಅತಾಚುರ್ಯಕ್ಕೆ ನಾನು ಕ್ಷಮೆ ಕೇಳುತ್ತೇನೆ. ನನ್ನ ಕ್ಷೇತ್ರದಲ್ಲಿ ಎಲ್ಲಿ ಬೇಕಾದ್ರೂ ಸ್ಥಾಪಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು.