– ಕುರಿ ಶೆಡ್ನಲ್ಲಿ ವಾಸವಿದ್ದ ವೃದ್ಧ ದಂಪತಿ
ಚಿಕ್ಕಬಳ್ಳಾಪುರ: ಧಾರಾಕಾರ ಮಳೆಗೆ ಕುರಿ ಶೆಡ್ನ ಗೋಡೆ ಕುಸಿದು ವೃದ್ಧೆ ಸಾವನ್ನಪ್ಪಿದ್ದು, ವೃದ್ಧ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕು ಜೂಲಪಾಳ್ಯದಲ್ಲಿ ನಡೆದಿದೆ.
ಗ್ರಾಮದ ಸಾಲಮ್ಮ (56) ಮೃತ ವೃದ್ಧೆ ಹಾಗೂ ಸಾಲಮ್ಮ ಪತಿ 70 ವರ್ಷದ ನರಸಿಂಹಯ್ಯ ಗಾಯಗೊಂಡವರು. ಅಂದಹಾಗೆ ಮನೆಯಿಲ್ಲದ ಬಡ ದಂಪತಿಯಾದ ಸಾಲಮ್ಮ-ನರಸಿಂಹಯ್ಯ ಕುರಿಗಳನ್ನು ಸಾಕುತ್ತಿದ್ದ ಶೆಡ್ನಲ್ಲಿ ವಾಸ ಮಾಡುತ್ತಿದ್ದರು.
ಸಾಕಷ್ಟು ಹಳೆಯದಾದ ಕಲ್ಲಿನ ಮೇಲ್ಚಾವಣಿಯ ಕುರಿ ಶೆಡ್ಗೆ ಇಟ್ಟಿಗೆ ಗೋಡೆಯಿದ್ದು, ಸಾಕಷ್ಟು ಹಳೆಯದಾದ ಗೋಡೆ ಮಳೆಯಿಂದ ಕುಸಿತಗೊಂಡಿದೆ. ಪರಿಣಾಮ ದಂಪತಿ ಇಬ್ಬರು ಗಂಭೀರವಾಗಿ ಗಾಯಗೊಂಡು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಜ್ಜಿ ಸಾಲಮ್ಮ ತೀರಿಕೊಂಡಿದ್ದು, ತಾತ ನರಸಿಂಹಯ್ಯ ಬೆನ್ನು ಮೂಳೆ ಹಾಗೂ ಕಾಲು ಮುರಿತವಾಗಿ ಹಾಸಿಗೆ ಹಿಡಿದಿದ್ದಾರೆ. ಪಾತಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.