ಕಾರವಾರ: ಮೀನುಗಾರರ ಸಮಸ್ಯೆ ಆಲಿಸಲು ಬಾರದೇ ಇದ್ದುದರಿಂದ ಮೀನುಗಾರರು ಸಚಿವರಿಗೆ ನೀಡಬೇಕಿದ್ದ ಮನವಿ ಪತ್ರವನ್ನು ಪೂಜೆ ಸಲ್ಲಿಸಿ ಸಮುದ್ರಕ್ಕೆ ಬಿಡುವ ಮೂಲಕ ಹೊನ್ನಾವರದ ಕಾಸರಕೋಡು ಬಂದರಿನಲ್ಲಿ ವಿನೂತನವಾಗಿ ಮೀನುಗಾರರು ಪ್ರತಿಭಟನೆ ಮಾಡಿದರು.
ಇಂದು ಹೊನ್ನಾವರದಲ್ಲಿ ಮೀನುಗಾರಿಕಾ ಸಚಿವ ಎಸ್.ಅಂಗಾರ ರವರು ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾಸರಗೋಡು ಬಂದರಿನಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಿಸದಂತೆ ಮೀನುಗಾರರು ಸಚಿವರಿಗೆ ಮನವಿ ಸಲ್ಲಿಸಲು ಹಾಗೂ ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೇ ವಿವಾದಿತ ಪ್ರದೇಶವೆಂದು ಸಚಿವರು ತಮ್ಮ ಬಂದರು ಬೇಟಿಯನ್ನು ರದ್ದುಗೊಳಿಸಿ ಉಡುಪಿಗೆ ಪ್ರಯಾಣ ಬೆಳಸಿದರು.
ತಮ್ಮ ಸಮಸ್ಯೆ ಆಲಿಸದಿದ್ದುದಕ್ಕೆ ನೊಂದ ಮೀನುಗಾರರು ಸಚಿವರಿಗೆ ಸಲ್ಲಿಸಬೇಕಿದ್ದ ಮನವಿ ಪತ್ರ ಹಾಗೂ ಸ್ವಾಗತಿಸಲು ತಂದಿದ್ದ ಹೂವಿನ ಪುಷ್ಪಗುಚ್ಛವನ್ನು ಸಮುದ್ರಕ್ಕೆ ಪೂಜೆ ಸಲ್ಲಿಸಿ ಬಿಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಮನವಿ ಪತ್ರದಲ್ಲಿ ಏನಿತ್ತು? ಸಚಿವರು ಬರದೇ ಇರುವುದಕ್ಕೆ ಕಾರಣ ಏನು?
ಮೀನುಗಾರರಿಗೆ ಸರ್ಕಾರ ಘೋಷಣೆ ಮಾಡಿದ ಪರಿಹಾರದಲ್ಲಿ ಮೀನುಗಾರಿಕಾ ವಿವಿಧ ಅವಲಂಭಿತ ಕಾರ್ಮಿಕರಿಗೆ ಆದೇಶದಲ್ಲಿ ಸೂಚಿಸಿಲ್ಲ. ಪರಿಹಾರ ಪ್ಯಾಕೇಜ್ ನಲ್ಲಿ ಗೊಂದಲವಿದ್ದು, ಎಲ್ಲಾ ಮೀನುಗಾರಿಕಾ ಅವಲಂಬಿತ ಕಾರ್ಮಿಕರಿಗೂ ಪರಿಹಾರ ನೀಡಬೇಕು ಎಂಬ ಮನವಿಯನ್ನು ಪತ್ರದಲ್ಲಿ ಉಲ್ಲೇಖ ಮಾಡಲಾಗಿತ್ತು. ಇನ್ನು ಬಂದರಿನಲ್ಲಿ ಮೀನುಗಾರಿಕಾ ಮಹಿಳೆಯರಿಗೆ ಸಮಸ್ಯೆ ಒಣಮೀನು ಒಣಗಿಸಲು ಸ್ಥಳಾವಕಾಶದ ಸಮಸ್ಯೆ, ಕುರಿತು ಮನವಿ ಪತ್ರವನ್ನ ಹೊನ್ನಾವರ ಮೀನುಗಾರರ ಸೊಸೈಟಿ, ಮೀನುಗಾರ ಕಾರ್ಮಿಕರ ಸಂಘ, ಹಸಿಮೀನು ವ್ಯಾಪಾರಿಗಳ ಸಂಘ,ಪರ್ಷಿಯನ್ ಬೋಟ್ ಯೂನಿಯನ್ ಗಳು ಸಲ್ಲಿಸಿ ತಮ್ಮ ಸಮಸ್ಯೆ ಬಗ್ಗೆ ಸಚಿವರ ಗಮನ ತರುವುದರಲ್ಲಿದ್ದರು. ಆದರೆ ಸಚಿವರು ಕೊನೆ ಕ್ಷಣದಲ್ಲಿ ಇಲ್ಲಿಗೆ ಬಾರದೇ ನೇರ ಉಡುಪಿ ಕಡೆ ಪ್ರಯಾಣಿಸಿದ್ದಾರೆ.
ವಿವಾದ ಮತ್ತು ಗಲಾಟೆ?
ಹೊನ್ನಾವರದಲ್ಲಿ ಕಾಸರಕೋಡು ಬಂದರು ವಿವಾದ ವರ್ಷಗಳಿಂದ ನಡೆಯುತ್ತಿದೆ. ಬಂದರಿ ಬಳಿಯಲ್ಲಿಯೇ ಹೊನ್ನಾವರ ಪೋರ್ಟ್ ಕಂಪನಿ ಪ್ರವೇಟ್ ಲಿಮಿಟೆಡ್ ಎಂಬ ಕಂಪನಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಮಾಡುತ್ತಿದೆ. ಇದಕ್ಕೆ ಮೀನುಗಾರರು ತೀವ್ರ ವಿರೋಧ ವ್ಯಕ್ತವಾಗಿದ್ದು ಈ ವಿಷಯ ಕೋರ್ಟ್ ನಲ್ಲಿದೆ. ಈ ಕುರಿತು ಸಚಿವರಿಗೆ ಮೀನುಗಾರರು ಮನವಿ ಪತ್ರ ಸಲ್ಲಿಸುತ್ತಾರೆ ಹಾಗೂ ಗಲಾಟೆ ಮಾಡುತ್ತಾರೆ ಎಂಬ ಸಂದೇಶವನ್ನು ಸಚಿವರಿಗೆ ಅವರ ಆಪ್ತ ಮೂಲಗಳು ತಪ್ಪಾಗಿ ಮಾಹಿತಿ ನೀಡಿದೆ. ಹೀಗಾಗಿ ಮೊದಲೇ ನಿರ್ಧಾರವಾಗಿದ್ದ ಕಾಸರಕೋಡು ಬಂದರು ಭೇಟಿಯನ್ನು ಗಲಾಟೆಯಾಗಬಹುದು ಎಂಬ ನೆಪದಲ್ಲಿ ಸಚಿವರು ಕೊನೆ ಕ್ಷಣದಲ್ಲಿ ಮೊಡಕುಗೊಳಿಸಿದ್ದಾರೆ ಎಂಬ ಮಾಹಿತಿ ಅವರ ಆಪ್ತ ಮೂಲದಿಂದ ತಿಳಿದುಬಂದಿದೆ.
ಇದೇ ಮೊದಲಬಾರಿ ಈ ಭಾಗದಲ್ಲಿ ಮೀನುಗಾರರ ಸಮಸ್ಯೆ ಆಲಿಸಲು ಹಾಗೂ ಅಭಿವೃದ್ಧಿ ಕಾರ್ಯ ವೀಕ್ಷಿಸಲು ಬಂದ ಸಚಿವರು ಹೀಗೆ ಏಕಾಏಕಿ ಮೀನುಗಾರರ ಸಮಸ್ಯೆ ಆಲಿಸದೇ ಕಾರ್ಯಕ್ರಮವನ್ನೇ ಮೊಟಕುಗೊಳಸಿ ತೆರಳಿದ್ದು ಮೀನುಗಾರರಲ್ಲಿ ಬೇಸರ ಮೂಡಿಸದೆ.