ಬೆಂಗಳೂರು: ಆನೇಕಲ್ ತಾಲೂಕಿನ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದ ಮತ್ತೋರ್ವ ಕಳ್ಳನಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಪೊಲೀಸರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ.
ಮೂವರು ಆರೋಪಿಗಳು ಮೇ 17ರಂದು ಕಬ್ಬಿಣ ಕಳ್ಳತನ ಮಾಡುವಾಗ ರೆಡ್ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿನಿದ್ದಿದ್ದರು. ಅಷ್ಟೇ ಅಲ್ಲದೆ ಸ್ಥಳೀಯರು ಆರೋಪಿಗಳನ್ನು ತಳಿಸಿದ್ದರು. ಈ ಪೈಕಿ ಮಂಗಳವಾರ ಪಾದರಾಯನಪುರ ನಿವಾಸಿಯಾಗಿದ್ದ ಕಳ್ಳ (ರೋಗಿ-1396)ಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದರಿಂದಾಗಿ ಉಳಿದ ಇಬ್ಬರು ಕಳ್ಳರನ್ನು ಪರೀಕ್ಷೆಗೆ ಒಳಪಡಿಸಿದ್ದು, ಒಬ್ಬನ ರಿಪೋರ್ಟ್ ಪಾಸಿಟಿವ್ ಬಂದಿದೆ. ಇನ್ನೋರ್ವ ಆರೋಪಿಯ ವರದಿಯು ನೆಗೆಟಿವ್ ಬಂದಿದೆ.
ಬುಧವಾರ ಸೋಂಕು ಪತ್ತೆಯಾದ ಕಳ್ಳ ರೋಗಿ-1397 ಆಗಿದ್ದು, ಆತನನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸೋಂಕಿತರ ಜೊತೆಗೆ ಸಂಪರ್ಕ ಹೊಂದಿದ್ದ ಹೆಬ್ಬಗೋಡಿ ಠಾಣೆಯ ಇನ್ಸ್ಪೆಕ್ಟರ್ ಬಿ.ಕೆ.ಶೇಖರ್, ಎಸ್ಐ ಶಂಕರ್ ಸೇರಿದಂತೆ 22 ಜನ ಪೊಲೀಸರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಅವರ ಗಂಟಲು ದ್ರವವನ್ನು ಟೆಸ್ಟ್ ಗೆ ಕಳುಹಿಸಲಾಗಿದ್ದು, ರಿಪೋರ್ಟ್ ಶುಕ್ರವಾರ ಬರಲಿದೆ.
ಮತ್ತೊಬ್ಬ ಕಳ್ಳನಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಹೆಬ್ಬಗೋಡಿ ಪೊಲೀಸರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ ಹೆಬ್ಬಗೋಡಿ ಠಾಣೆಗೆ ದಿನಕ್ಕೆ ಮೂರು ಬಾರಿ ಸ್ಯಾನಿಟೈರ್ ಸಿಂಪಡಣೆ ಮಾಡಲಾಗುತ್ತಿದೆ.