ಚಿಕ್ಕಮಗಳೂರು: ವಿದ್ಯುತ್ ಕಂಬವೊಂದು ಭಾರೀ ಗಾಳಿಗೆ ಮನೆ ಮೇಲೆ ಮುರಿದು ಬಿದ್ದು, ಕಂಬ ಬಿದ್ದ ಸ್ಥಳದ ಅಕ್ಕಪಕ್ಕದಲ್ಲಿ ಗ್ರೌಂಡಿಂಗ್ ಆಗುತ್ತಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಕಮಕ್ಕಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಮಲೆನಾಡಿಗರ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆ ಬೀಸುತ್ತಿರುವ ರಣ ಗಾಳಿಯಿಂದ ಮುರಿದು ಬಿದ್ದ ಮರ, ವಿದ್ಯುತ್ ಕಂಬಗಳು ಲೆಕ್ಕವೇ ಇಲ್ಲ. ಈ ಮಧ್ಯೆ ಮನೆ ಮೇಲೆ ಬಿದ್ದ ವಿದ್ಯುತ್ ಕಂಬದ ಸುತ್ತಮುತ್ತ ಗ್ರೌಂಡಿಂಗ್ ಆಗಿದೆ. ಇದನ್ನೂ ಓದಿ: ಮಲೆನಾಡಲ್ಲಿ ಮಳೆ ಅಬ್ಬರ – ಅಜ್ಜಿ ಪಾರು, ಹೆದ್ದಾರಿ ಬಂದ್, ಮನೆ-ಕಟ್ಟಡಗಳ ಕುಸಿತ
ಹೀಗಾಗಿ ಕೂಡಲೇ ಸ್ಥಳಿಯರು ವಿಷಯವನ್ನು ಮೆಸ್ಕಾಂ ಸಿಬ್ಬಂದಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮಳೆ ಸುರಿಯುತ್ತಿದೆ, ಸ್ಥಳದಲ್ಲಿ ಗ್ರೌಂಡಿಂಗ್ ಮತ್ತೊಂದು ಅನಾಹುತವಾಗುವುದು ಬೇಡವೆಂದು ಸ್ಥಳೀಯರೇ ಮುಂದಾಗಿ ರಸ್ತೆಗೆ ಮರದ ದಿಮ್ಮೆಗಳನ್ನು ಅಡ್ಡವಿಟ್ಟು ಸಂಚಾರವನ್ನೇ ಬಂದ್ ಮಾಡಿದ್ದಾರೆ.
ನಂತರ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದ ವಿಷಯ ತಿಳಿದ ಬಣಕಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುವ ವೇಳೆ ಸ್ಥಳೀಯರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಫೋನ್ ಮಾಡಿದ ಬಳಿಕವೂ ತಡವಾಗಿ ಬಂದ ಮೆಸ್ಕಾಂ ಸಿಬ್ಬಂದಿಗೆ ಕೂಡ ಸ್ಥಳೀಯರೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಕೊಡಗಿನ ವಿವಿಧೆಡೆ ಮುಂದುವರಿದ ಮಳೆ- ಹೆಗ್ಗಳ ಗ್ರಾಮದಿಂದ ಕುಟುಂಬಗಳ ಸ್ಥಳಾಂತರ