-ಗುಡುಗು, ಆಲಿಕಲ್ಲು ಸಹಿತ ಮಳೆ
ಬೆಂಗಳೂರು: ಭಾನುವಾರದ ಮಳೆಗೆ ಬೆಚ್ಚಿಬಿದ್ದಿದ್ದ ಜನತೆ ಸಿಲಿಕಾನ್ ಸಿಟಿಗೆ ಇಂದು ಸಂಜೆ ವರುಣದೇವ ಅಬ್ಬರಿಸುವ ಮೂಲಕ ಶಾಕ್ ನೀಡಿದ್ದಾನೆ.
ಮಧ್ಯಾಹ್ನದ ಬಿಸಿಲಿಗೆ ಬಳಲಿದ್ದ ಜನತೆಗೆ ವರುಣರಾಯ ತಂಪು ನೀಡಿದ್ದಾನೆ. ಸಂಜೆ ನಾಲ್ಕು ಗಂಟೆಯ ನಂತರ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಸರಿಯಾಗಿ ಆರು ಗಂಟೆಗೆ ಬಿರುಗಾಳಿ ಸಹಿತ ಅಬ್ಬರಿಸಿದ್ದಾನೆ. ಪಾರ್ಕ್ ಮಾಡಿದ್ದ ದ್ವಿಚಕ್ರ ವಾಹನಗಳು ಬಿರುಗಾಳಿ ಹೊಡೆತಕ್ಕೆ ಬೀಳುತ್ತಿವೆ. ಕೆಲವು ಭಾಗಗಳಲ್ಲಿ ಗುಡುಗು, ಆಲಿಕಲ್ಲು ಸಹಿತ ಮಳೆಯಾಗಿದೆ.
ಬೆಂಗಳೂರಿನ ಯಶವಂತಪುರ, ಮಲ್ಲೇಶ್ವರ, ರಾಜಾಜಿನಗರ, ಜಾಲಹಳ್ಳಿ, ಮತ್ತಿಕೆರೆ ಸೇರಿದಂತೆ ಹಲವಡೆ ಬಿರುಸಿನ ಮಳೆಯಾಗಿದೆ. ಭಾನುವಾರ ಲಾಕ್ಡೌನ್ ಆಗಿದ್ದರಿಂದ ನಗರದಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಇಂದು ಕೆಲಸ ಮುಗಿಸಿ ಮನೆಯತ್ತ ಹೊರಟ ಜನರು ಮಳೆಯಲ್ಲಿ ಸಿಲುಕಿದರು.