ದೆಹಲಿ: ಅಗ್ನಿ ಅವಘಡದಲ್ಲಿ ಸಿಲುಕಿಕೊಂಡಿದ್ದ 87 ವರ್ಷದ ಮಹಿಳೆ ಸೇರಿದಂತೆ ಆಕೆಯ ಕುಟುಂಬದವರನ್ನು ದೆಹಲಿ ಪೊಲೀಸ್ ಸಿಬ್ಬಂದಿ ರಕ್ಷಿಸಿದ್ದಾರೆ. ಬೆಳಗ್ಗೆ 6.55 ಗಂಟೆಗೆ ಘಟನೆ ಕುರಿತಂತೆ ಮಾಹಿತಿ ದೊರೆಯುತ್ತಿದ್ದಂತೆಯೇ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಅಪಾಯದಲ್ಲಿದ್ದ ಕುಟುಂಬವನ್ನು ಉಳಿಸಿದ್ದಾರೆ.
ಕಟ್ಟಡದ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪೊಲೀಸರ ತಂಡ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಮೂರನೇ ಮಹಡಿಗೆ ಬೆಂಕಿ ಆವರಿಸಿಕೊಂಡಿತ್ತು. ಬೆಂಕಿ ಅನಾಹುತದಿಂದಿ ಕುಟುಂಬವನ್ನು ಉಳಿಸಲು ಹೆಚ್ಸಿ ಮುನ್ಶಿಲಾಲ್ ಮತ್ತು ಸಿಟಿ ಸಂದೀಪ್ ಎಂಬ ಇಬ್ಬರು ಪೊಲೀಸ್ ಅಧಿಕಾರಿಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕಟ್ಟಡದ ಕಬ್ಬಿಣದ ಗ್ರಿಲ್ ಮೇಲೆ ಹತ್ತಿದರು ಮತ್ತು ಗಾಬರಿಯಾಗಿದ್ದ ಕುಟುಂಬದವರೊಂದಿಗೆ ಮಾತನಾಡಿ ಅವರನ್ನು ಸಮಾಧಾನಗೊಳಿಸಿ ರಕ್ಷಿಸಲು ಸಹಕಾರ ನೀಡುವಂತೆ ತಿಳಿಸಿದ್ದಾರೆ.
ಮೂವರು ಮೂರನೇ ಮಹಡಿಯ ಬಾಲ್ಕನಿಯಲ್ಲಿ ಸಿಲುಕಿಕೊಂಡಿದ್ದರು. ಬೆಂಕಿ ಸಂಪೂರ್ಣವಾಗಿ ನಂದಿ ಹೋಗದಿದ್ದರಿಂದ ಮೊದಲು ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಆದರೆ ಬಳಿಕ ಅಗ್ನಿ ಶಾಮಕ ದಳ ಸ್ಥಳಕ್ಕೆ ತಲುಪಿ ಬೆಂಕಿ ನಂದಿಸಿದರು. ಹೀಗೆ ಅಗ್ನಿಶಾಮಕ ದಳ ಸಿಬ್ಬಂದಿ ಸಹಾಯದಿಂದ ಪೊಲೀಸರು ಕುಟುಂಬವನ್ನು ರಕ್ಷಿಸಿದರು ಎಂದು ಅಧಿಕಾರಿಗಳು ಹೇಳಿದರು.