ಬೆಳಗಾವಿ: ಪ್ರೇಮಿಗಳ ದಿನದಂತೆ ಜೋಡಿ ನೇಣು ಬಿಗಿದುಕೊಂಡು ಆತ್ಮಹತ್ಯಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ನಡೆದಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹಂಚಿನಾಳ ಗ್ರಾಮದ ಆಸೀಫ್ ಜವಳಿ (21) ಮತ್ತು ಮಾಸಾಬಿ (19) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಆಸೀಫ್ ಮತ್ತು ಮಾಸಾಬಿ ಒಂದೇ ಗ್ರಾಮದವರಾಗಿದ್ದರಿಂದ ಇಬ್ಬರ ನಡುವೆ ಪ್ರೇಮದ ಸೆಲೆ ಚಿಗುರೊಡೆದಿತ್ತು. ಆದ್ರೆ ಇಬ್ಬರ ಮದುವೆಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಇತ್ತ ಮಾಸಾಬಿ ಮದುವೆಯನ್ನ ಬೇರೆ ಹುಡುಗನ ಜೊತೆ ನಿಶ್ಚಯ ಮಾಡಲಾಗಿತ್ತು.
ಮಾರ್ಚ್ 8ರಂದು ಮಾಸಾಬಿ ಮದುವೆ ಮಾಡಲು ಕುಟುಂಬಸ್ಥರು ತೀರ್ಮಾನಿಸಿದ್ದರು. ಪೋಷಕರ ನಿರ್ಧಾರದಿಂದ ನೊಂದ ಆಸೀಫ್ ಮತ್ತು ಮಾಸಾಬಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.