– ಕೊರೊನಾ ಗೆದ್ದ ಉಡುಪಿಯ 9 ಪೊಲೀಸರು ಡಿಸ್ಚಾರ್ಜ್
ಉಡುಪಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ಪೊಲೀಸರು ಯೋಧರಂತೆ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಎಲ್ಲಾ ಪೊಲೀಸರನ್ನು ಅಸ್ಪೃಶ್ಯರಂತೆ ನೋಡಬೇಡಿ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮನವಿ ಮಾಡಿದ್ದಾರೆ.
ಉಡುಪಿ ಜಿಲ್ಲೆಯ 9 ಪೊಲೀಸರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಅವರ ಜೊತೆ ಕೆಲಸ ಮಾಡಿದ್ದ ಇತರೇ ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಜಿಲ್ಲೆಯ ಜನ ಖಾಕಿ ಯುನಿಫಾರ್ಮ್ ನೋಡಿದಾಗ ದೂರ ಹೋಗುತ್ತಿದ್ದರು. ಗೆಳೆಯರು ಕೂಡಾ ಅಂತರ ಕಾಯ್ದು ಕೊಳ್ಳುತ್ತಿದ್ದರು ಎಂಬ ದೂರುಗಳು ಉಡುಪಿಯಲ್ಲಿ ಕೇಳಿಬಂದಿತ್ತು.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಡಿಸಿ ಜಿ.ಜಗದೀಶ್, ಉಡುಪಿ ಜಿಲ್ಲೆಯಲ್ಲಿ 9 ಪೊಲೀಸರಿಗೆ ಕೊರೊನಾ ಬಂದಿತ್ತು. ಇಡೀ ಜಿಲ್ಲೆಗೆ ಬಹಳ ಆತಂಕವಾಗಿತ್ತು. ಎಲ್ಲಾ 9 ಜನ ಪೊಲೀಸರು ಗುಣಮುಖರಾಗಿ ಡಿಸ್ಚಾರ್ಜ್ ಆಗುತ್ತಿದ್ದಾರೆ. ಪೊಲೀಸರು, ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಕೊರೊನಾ ವಾರಿಯರ್ಸ್ಗಳು. ಕೊರೊನಾ ವಾರಿಯರ್ಸ್ಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಕೊರೊನಾ ಬಂತು ಅಂತ ಸಾರ್ವಜನಿಕವಾಗಿ ಪೊಲೀಸರನ್ನು ಯಾರೂ ಸಂಶಯದಿಂದ ನೋಡಬಾರದು. ಕೊರೊನಾ ಬಂದ ಸಾರ್ವಜನಿಕರನ್ನು ಅಸ್ಪೃಶ್ಯರಂತೆ ನೋಡಬಾರದು. ಪೊಲೀಸರು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ಮಾಡುವ ಯೋಧರು, ಪೊಲೀಸರ ಮೇಲೆ ಸಾರ್ವಜನಿಕರಿಗೆ ಹೆಚ್ಚು ಗೌರವ ಬರಬೇಕು ಎಂದು ತಿಳಿಸಿದರು.