– ಸುಟ್ಟ ದೇಹವನ್ನ ತೊಗರಿ ಹೊಲದಲ್ಲಿ ಎಸೆದ್ರು
ಬೀದರ್: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ 17 ವರ್ಷದ ಹುಡುಗನನ್ನ ಕೊಲೆಗೈದಿರುವ ಘಟನೆ ಜಿಲ್ಲೆಯ ಕಮಲನಗರ ತಾಲೂಕಿನ ಕೋಟಗ್ಯಾಳ ಗ್ರಾಮದಲ್ಲಿ ನಡೆದಿದೆ.
17 ವರ್ಷದ ಶಿವಕುಮಾರ್ ಹಾವಪ್ಪ ಕೊಲೆಯಾದ ಹುಡುಗ. ಔರಾದ್ ತಾಲೂಕಿನ ನಾಗಮಾರಪಳ್ಳಿ ನಿವಾಸಿಯಾಗಿದ್ದ ಶಿವಕುಮಾರ್ ನನ್ನು ಅಡ್ಡಗಟ್ಟಿರುವ ದುಷ್ಕರ್ಮಿಗಳು ಕೊಂದು ಶವವನ್ನ ರಸ್ತೆಬದಿಯ ತೊಗರಿ ಹೊಲದಲ್ಲಿ ಎಸೆದು ಪರಾರಿಯಾಗಿದ್ದಾರೆ. ಶಿವಕುಮಾರ್ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ದೇವಣಿ ಪಟ್ಟಣದಲ್ಲಿರುವ ಸೋದರಿ ಮನೆಯಿಂದ ಬೈಕ್ ನಲ್ಲಿ ನಾಗಮಾರಪಳ್ಳಿಗೆ ಹಿಂದಿರುಗುತ್ತಿದ್ದನು. ಮಾರ್ಗ ಮಧ್ಯೆಯೇ ಈ ಕೊಲೆ ನಡೆದಿದೆ.
ಸಂಜೆಯಾದರೂ ಶಿವಕುಮಾರ್ ಮನೆಗೆ ಬಾರದಿದ್ದಾಗ ಆತಂಕಗೊಂಡ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೊದಲು ಕೋಟಗ್ಯಾಳ ಗ್ರಾಮದ ಹೊರ ವಲಯದಲ್ಲಿ ಶಿವಕುಮಾರ್ ಬೈಕ್ ಪತ್ತೆಯಾಗಿದೆ. ನಂತರ ಸ್ಥಳದ ಸುತ್ತಮುತ್ತ ಪರಿಶೀಲನೆ ನಡೆಸಿದಾಗ ತೊಗರಿ ಬೆಳೆ ಮಧ್ಯೆ ಶಿವಕುಮಾರ್ ಮೃತದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ್ ಬ್ಯಾಕೋಡ್, ಡಿವೈಎಸ್ಪಿ ಡಾ.ದೇವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕುಟುಂಬಸ್ಥರು ಮತ್ತು ಆತನ ಆಪ್ತರ ಹೇಳಿಕೆಗಳನ್ನ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.