– ತಾಳಿ ಅಡವಿಟ್ಟು ಟಿವಿ ಖರೀದಿಸಿದ್ದ ಮಹಾತಾಯಿ
– ಮಕ್ಕಳ ಶಿಕ್ಷಣಕ್ಕೆ ಟಿವಿ ಖರೀದಿ
ಗದಗ: ಮಕ್ಕಳ ಶಿಕ್ಷಣಕ್ಕಾಗಿ ತಾಯಿ ತನ್ನ ಚಿನ್ನದ ತಾಳಿಯನ್ನೇ ಒತ್ತೆ ಇಟ್ಟು ಟಿವಿ ಖರೀದಿಸಿದ್ದ ಮನಕಲುಕುವ ಘಟನೆ ಗದಗದಲ್ಲಿ ನಡೆದಿತ್ತು. ವರದಿ ನೋಡಿದರೆ ಎಂತಹವರಿಗೂ ಕರುಳು ಹಿಂಡುವಂತಿತ್ತು. ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ವರದಿಯಿಂದಾಗಿ ರಾಜಕಾರಣಿಗಳೂ ಸೇರಿದಂತೆ ಹಲವರು ಸಹಾಯ ಮಾಡಲು ಮುಂದಾಗಿದ್ದರು. ಆದರೆ ಇದೀಗ ಮತ್ತೊಂದು ಸಂತಸದ ಸುದ್ದಿ ಹೊರ ಬಿದ್ದಿದ್ದು, ಸ್ವತಃ ಗಿರವಿ ಅಂಗಡಿ ಮಾಲೀಕರೇ ತ್ಯಾಗಮಯಿ ತಾಯಿಯ ಮಾಂಗಲ್ಯವನ್ನು ಮರಳಿ ನೀಡಿದ್ದಾರೆ.
- Advertisement 2
ಪಬ್ಲಿಕ್ ಟಿವಿ ವರದಿಯಿಂದಾಗಿ ಗಿರವಿ ಅಂಗಡಿ ಮಾಲೀಕ ಎಚ್ಚೆತ್ತುಕೊಂಡಿದ್ದು, ತ್ಯಾಗಮಯಿ ತಾಯಿಯ ಮಾಂಗಲ್ಯ ಸರವನ್ನು ಮರಳಿ ನೀಡಿದ್ದಾರೆ. ಜಿಲ್ಲೆಯ ನರಗುಂದ ತಾಲೂಕಿನ ರಡ್ಡೆರ ನಾಗನೂರ ಗ್ರಾಮದ ತಾಯಿ ಕಸ್ತೂರಿಯವರ ಮಾಂಗಲ್ಯವನ್ನು ಅಂಗಡಿ ಮಾಲೀಕ ಮರಳಿಸಿದ್ದಾರೆ. ಮಾಂಗಲ್ಯ ಬಿಡಿಸಿ ಕೊಟ್ಟಿದ್ದಕ್ಕೆ ಮಕ್ಕಳ ಶಿಕ್ಷಣಕ್ಕೆ ಸಹಾಯವಾಗಿದ್ದು, ಪಬ್ಲಿಕ್ ಟಿವಿ ವರದಿಯಿಂದ ತಾಯಿ ಕಸ್ತೂರಿ ಸಂತಸಗೊಂಡಿದ್ದಾರೆ. ಅಲ್ಲದೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಮಕ್ಕಳ ಆನ್ಲೈನ್ ಶಿಕ್ಷಣಕ್ಕಾಗಿ ಮಾಂಗಲ್ಯ ಅಡವಿಟ್ಟ ತಾಯಿ- ಗದಗ ಜಿಲ್ಲೆಯಲ್ಲಿ ಮನಕಲಕುವ ಘಟನೆ
- Advertisement 3
- Advertisement 4
ಮಕ್ಕಳ ಶಿಕ್ಷಣಕ್ಕಾಗಿ ತಾಯಿ ತನ್ನ ಚಿನ್ನದ ತಾಳಿಯನ್ನು ಅಡವಿಟ್ಟು ಟಿವಿ ಖರೀದಿ ಮಾಡಿರುವ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೆರ ನಾಗನೂರ ಗ್ರಾಮದಲ್ಲಿ ನಡೆದಿತ್ತು. ಗ್ರಾಮದ ಕಸ್ತೂರಿ ಅವರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕನಸು ಕಂಡಿದ್ದಾರೆ. ಅವರ ಮಕ್ಕಳು ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಕೊರೊನಾ ಕಂಠಕದಿಂದ ಮಕ್ಕಳಿಗೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠವನ್ನು ಕೇಳಲು ಶಿಕ್ಷಕರು ಪ್ರತಿದಿನ ಕರೆಮಾಡಿ ಟಿವಿ ನೋಡಿ ಎಂದು ಹೇಳುತ್ತಿದ್ದರು. ಜೊತೆಗೆ ಅದರಲ್ಲಿ ಬರುವ ಪಾಠಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಆದರೆ ಮನೆಯಲ್ಲಿ ಟಿವಿ ಇಲ್ಲದ ಕಾರಣ ಟಿವಿ ನೋಡಲು ಆಗುತ್ತಿರಲಿಲ್ಲ. ಹೀಗಾಗಿ ಮಕ್ಕಳಿಗಾಗಿ ಕಸ್ತೂರಿ ಅವರು ಟಿವಿ ಖರೀದಿ ಮಾಡಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದ ಕಸ್ತೂರಿ ಅವರು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಬಯಸಿದ್ದೆ. ಆದರೆ ಟಿವಿಯಲ್ಲಿ ಪಾಠ ಬರುತ್ತಿದ್ದ ಕಾರಣ ಮಕ್ಕಳು ಬೇರೆ ಮನೆಗೆ ಹೋಗಿ ಟಿವಿ ನೋಡುತ್ತಿದ್ದರು. ಆದರೆ ಅವರು ಬೇರೆ ಕಾರ್ಯಕ್ರಮಗಳನ್ನು ನೋಡುತ್ತಿದ್ದರು. ಹೀಗಾಗಿ ಮಕ್ಕಳು ಶಿಕ್ಷಣ ವಂಚಿತರಾಗಬಾರದೆಂದು ಟಿವಿ ಖರೀದಿ ಮಾಡುವ ನಿರ್ಧಾರ ಮಾಡಿದೆ. ಆದರೆ ಗ್ರಾಮದಲ್ಲಿ ಯಾರ ಬಳಿಯೂ ಸಾಲ ಲಭಿಸಿರಲಿಲ್ಲ. ಆದ್ದರಿಂದ ನನ್ನ ಬಳಿ ಇದ್ದ ಮಾಂಗಲ್ಯವನ್ನು ಅಡವಿಟ್ಟು ಟಿವಿ ತಂದಿದ್ದೇನೆ ಎಂದು ಹೇಳಿದ್ದರು.