– ವಿಶ್ ಮಾಡಲು ಬಂದವರಲ್ಲಿ ವೋಟ್ ಕೇಳಿದ್ರು!
ತಿರುವನಂತಪುರಂ: ಪಂಚಾಯತ್ ಚುನಾವಣೆಯ ಬಿರುಸಿನ ಪ್ರಚಾರದ ನಡುವೆಯೇ ಮಹಿಳಾ ಅಭ್ಯರ್ಥಿಯೊಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಘಟನೆ ಕೊಟ್ಟಾಯಂನ ವೈಕೋಮ್ ಎಂಬಲ್ಲಿ ನಡೆದಿದೆ.
ಲಾವಣ್ಯ ಹಸೆಮಣೆ ಏರಿದ ಅಭ್ಯರ್ಥಿ. ಈಕೆ 15ನೇ ವಾರ್ಡಿನಿಂದ ಎಲ್ಡಿಎಫ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದೀಗ ಈಕೆ ಚೆಮ್ಮನಕರಿ ಅಯ್ಯಂಕಲಿ ಸಾಂಸ್ಕೃತಿಕ ಕೇಂದ್ರದಲ್ಲಿ ಸೋಮವಾರ ಸಪ್ತಪದಿ ತುಳಿದಿದ್ದಾರೆ.
ಲಾವಣ್ಯ ತನ್ನ ಮತದಾರರ ಸಮ್ಮುಖದಲ್ಲಿ ಶರತ್ ಜೊತೆ ವಿವಾಹವಾದರು. ಮದುವೆ ಸಮಾರಂಭದಲ್ಲಿ ತಮಗೆ ಶುಭಾಶಯ ಕೋರಲು ಬಂದ ಸಾರ್ವಜನಿಕರಲ್ಲಿ ತಮಗೆ ವೋಟ್ ಹಾಕುವಂತೆ ಹೇಳುವುದನ್ನು ಲಾವಣ್ಯ ಮರೆತಿರಲಿಲ್ಲ. ಹೀಗಾಗಿ ಬಂದವರ ಬಳಿ ತಮಗೆ ಮತ ನೀಡುವಂತೆ ಕೋರಿದರು. ಲಾವನ್ಯಾ ವಿರುದ್ಧ ನಿಂತಿರುವ ಅಭ್ಯರ್ಥಿಗಳಾದ ಯುಡಿಎಫ್ ಅಭ್ಯರ್ಥಿ ಮಜಿತಾ ಲಾಲ್ಜಿ ಮತ್ತು ಎನ್ಡಿಎ ಅಭ್ಯರ್ಥಿ ಪಿ.ಕೆ ಬಿನು ಕೂಡ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಬಿನು ಅವರು ಲಾವಣ್ಯ ಸಂಬಂಧಿಯಾಗಿದ್ದಾರೆ.
ಫೆಬ್ರವರಿ 2 ರಂದು ಲಾವಣ್ಯ ನಿಶ್ಚಿತಾರ್ಥ ನೆರವೇರಿತ್ತು. ಮದುವೆಯನ್ನು ಮೇ 10 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಕೊರೊನಾ ಲಾಕ್ಡೌನ್ ಪರಿಣಾಮ ಮದುವೆ ದಿನಾಂಕವನ್ನು ಮುಂದೂಡಲಾಯಿತು. ಈ ಮಧ್ಯೆ ಲಾವಣ್ಯ ಅವರನ್ನು ವಾರ್ಡ್ನಲ್ಲಿ ಎಲ್ಡಿಎಫ್ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಯಿತು. ಆದರೆ ವಧು-ವರರಿಬ್ಬರ ಕುಟುಂಬಗಳು ಮದುವೆಯನ್ನು ಮತ್ತಷ್ಟು ಮುಂದೂಡದಿರಲು ನಿರ್ಧರಿಸಿದರು.
ಲಾವಣ್ಯ ಕುಲಶೇಖರಮಂಗಲಂ ಮೂಲದ ಕಮಲಾಸನನ್ ಮತ್ತು ಕಾಂಚನ ದಂಪತಿಯ ಪುತ್ರಿ. ಶರತ್ ಅವರು ಚೆಮ್ಮನಕರಿ ಮೂಲದ ಚಂದ್ರನ್ ಮತ್ತು ಸಂತ ಅವರ ಪುತ್ರ.