ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ವಿರುದ್ಧ ಜಮ್ಮು ಕಾಶ್ಮೀರದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ.
ಆಜಾದ್, ಗುಜ್ಜರ್ ಚಾರಿಟೇಬಲ್ ಟ್ರಸ್ಟ್ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಭಾರತ ದೇಶದ ಹೆಮ್ಮೆ ಎಂದು ಗುಣಗಾನ ಮಾಡಿದ್ದರು. ಈ ಮಾತು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಆಜಾದ್ ವಿರುದ್ಧ ಘೋಷಣೆ ಕೂಗಿ ಅವರ ಪ್ರತಿಕೃತಿಯನ್ನು ಸುಟ್ಟು ಪ್ರತಿಭಟನೆ ನಡೆಸಿದ್ದಾರೆ.
ಆಜಾದ್ ಅವರನ್ನು ಕಾಂಗ್ರೆಸ್ ಪಕ್ಷ ಬಹಳ ಗೌರವದಿಂದ ನಡೆಸಿಕೊಂಡು ಬಂದಿತ್ತು. ಆದರೆ ಆಜಾದ್ ಮಾತ್ರ ಕಾಂಗ್ರೆಸ್ ಪರ ನಿಲ್ಲದೆ ಬೆಜೆಪಿಯ ಸ್ನೇಹಕ್ಕೆ ಹತ್ತಿರವಾಗಿ ಮೋದಿ ಅವರನ್ನು ಹೊಗಳಿರುವುದು ಬೇಸರ ತಂದಿದೆ. ಕಾಶ್ಮೀರದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಸಮಯದಲ್ಲೂ ಆಜಾದ್ ಇಲ್ಲಿ ಬಂದು ಕಾಂಗ್ರೆಸ್ ಪರ ಪ್ರಚಾರ ಮಾಡಿರಲಿಲ್ಲ. ಆದರೆ ಇದೀಗ ಇಲ್ಲಿಗೆ ಬಂದು ಮೋದಿ ಅವರನ್ನು ಹೊಗಲಿದ್ದಾರೆ ಎಂದು ಪ್ರತಿಭಟನಾ ನಿರತ ಕಾರ್ಯಕರ್ತರೊಬ್ಬರು ಆಕ್ರೋಶ ಹೊರಹಾಕಿದ್ದಾರೆ.
ಈ ಹಿಂದೆ ರಾಜ್ಯಸಭೆಯಿಂದ ನಿವೃತ್ತಿಯಾದ ಆಜಾದ್ ಅವರ ಕೆಲಸವನ್ನು ಶ್ಲಾಘಿಸಿ ಪ್ರಧಾನಿ ಮೋದಿ ಭಾವುಕರಾಗಿ ಕಣ್ಣೀರು ಹಾಕಿದ್ದರು. ಆ ಬಳಿಕ ಆಜಾದ್ ಮೋದಿಯನ್ನು ನೋಡಿ ದೇಶದ ಜನರು ಕಲಿಯಲು ಸಾಕಷ್ಟಿದೆ. ಪ್ರಧಾನಿಯಾಗಿದ್ದರು ತಮ್ಮ ಹಿಂದಿನ ದಿನಗಳಲ್ಲಿ ಚಹಾ ಮಾರಾಟ ಮಾಡುತ್ತಿದ್ದ ಕಾಯಕವನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಹಾಗಾಗಿ ಮೋದಿ ಅವರ ಗುಣ ನನಗೆ ತುಂಬಾ ಹಿಡಿಸಿದೆ ಎಂದು ಹೊಗಳಿದ್ದರು.