ರಾಯಚೂರು: ತಡರಾತ್ರಿ ಗುಜುರಿ ಅಂಗಡಿಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನ ಕೋಟೆಯಲ್ಲಿ ನಡೆದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಗುಜುರಿ ಅಂಗಡಿಯು ಸೈಯದ್ ಉಸ್ಮಾನ್ ಎಂಬವರಿಗೆ ಸೇರಿದೆ. ಘಟನೆಯಿಂದ ಅಂಗಡಿಯಲ್ಲಿದ್ದ ನಾಲ್ಕು ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಕೂಡಲೇ ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿನಂದಿಸಿದ್ದರಿಂದ ಕೆಲವಷ್ಟು ವಸ್ತುಗಳು ಉಳಿದುಕೊಂಡಿದೆ.
ಸುಮಾರು ಎಂಟು ಲಕ್ಷ ಮೌಲ್ಯದ ವಸ್ತುಗಳಲ್ಲಿ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ವಸ್ತು ಸುಟ್ಟುಹೋಗಿವೆ. ಆದರೆ ಬೆಂಕಿ ಹೊತ್ತಿಕೊಂಡಿದ್ದರ ಕಾರಣ ಇನ್ನೂ ತಿಳಿದು ಬಂದಿಲ್ಲ. ಕಳೆದ ವರ್ಷ ಸಹ ಗುಜುರಿ ಅಂಗಡಿಗೆ ಆಕಸ್ಮಿಕ ಬೆಂಕಿ ಹೊತ್ತಿ ಎರಡು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಹಾಳಾಗಿದ್ದವು. ಈಗ ಪುನಃ ಬೆಂಕಿ ಅವಘಡ ಸಂಭವಿಸಿದೆ.
ಈ ಸಂಬಂಧ ಸಿಂಧನೂರು ನಗರ ಪೋಲೀಸ್ ಠಾಣೆಯಲ್ಲಿ ಸೈಯದ್ ಉಸ್ಮಾನ್ ಪ್ರಕರಣ ದಾಖಲಿಸಿದ್ದಾರೆ.