ಬೆಂಗಳೂರು: ಖ್ಯಾತ ಸ್ಯಾಕ್ಸೋಫೋನ್ ವಾದಕ ಮಚ್ಚೇಂದ್ರನಾಥ್ ಜೋಗಿ ಅವರ ನಿಧನಕ್ಕೆ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಕೊರೋನಾದಿಂದ ಇತ್ತೀಚೆಗೆ ವಿಧಿವಶರಾದ ಮಚ್ಚೇಂದ್ರನಾಥ್, ಸುಮಾರು ಮೂರು ದಶಕಗಳಿಂದ ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ಸ್ಯಾಕ್ಸೋಫೋನ್ ಕಲಾವಿದರಾಗಿದ್ದರು. ಅಂತಾರಾಷ್ಟ್ರೀಯ ಖ್ಯಾತಿಯ ಸ್ಯಾಕ್ಸೋಫೋನ್ ಕಲಾವಿದರಾಗಿದ್ದ ಅವರ ಇಡೀ ಕುಟುಂಬ ಸಂಗೀತ ಸೇವೆಯಲ್ಲಿ ತೊಡಗಿದೆ.
ಮಚ್ಚೇಂದ್ರನಾಥ್ ಅವರಿಗೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕಲಾರತ್ನ ಪ್ರಶಸ್ತಿ, ಕಲಾಶ್ರೀ ರಾಜ್ಯ ಪ್ರಶಸ್ತಿ, ಕನ್ನಡ ರತ್ನ ರಾಜ್ಯ ಪ್ರಶಸ್ತಿ, ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ, ಬಸವ ಜ್ಯೋತಿ ಪ್ರಶಸ್ತಿ, ಅರ್ರ್ಯಭಟ ಪ್ರಶಸ್ತಿ, ಸಮಾಜ ರತ್ನ ಪ್ರಶಸ್ತಿ, ದೇವರ ದಾಸಿಮಯ್ಯ ರಾಷ್ಟೀಯ ರತ್ನ ಪ್ರಶಸ್ತಿ, ಸೌರಭ ಪ್ರಶಸ್ತಿ, ಸಾಧನ ಪ್ರಶಸ್ತಿ, ಚೈತನ್ಯ ಶ್ರೀ ಪ್ರಶಸ್ತಿ, ಕರ್ನಾಟಕ ಪದ್ಮಶ್ರೀ ಪ್ರಶಸ್ತಿ ಮೊದಲಾದವು ಲಭಿಸಿದೆ. ಪುತ್ತೂರಿನ ಕಲ್ಲಾರೆಯಲ್ಲಿ ಜನಿಸಿದ್ದ ಮಚ್ಚೇಂದ್ರನಾಥ್, ತಂದೆ ಬಾಬು ಮತ್ತು ಸಹೋದರ ಹರಿಶ್ಚಂದ್ರ ಅವರಿಂದ ಸಂಗೀತಾಭ್ಯಾಸ ಮಾಡಿ ಹತ್ತೊಂಬತ್ತರ ಹರೆಯದಲ್ಲಿಯೇ ಸ್ಯಾಕ್ಸೋಫೋನ್ ಕಲಾವಿದರಾಗಿದ್ದರು. ಇದನ್ನೂ ಓದಿ: ದಕ್ಷಿಣ ಕನ್ನಡದ ಮೊದಲ ಆಕ್ಸಿಜನ್ ಉತ್ಪಾದನಾ ಘಟಕ ಬಂಟ್ವಾಳದಲ್ಲಿ ಉದ್ಘಾಟನೆ
ಇವರ ಪತ್ನಿ ಸುಶೀಲ ಸ್ವತಃ ಸಂಗೀತ ಕಲಾವಿದೆಯಾಗಿದ್ದು ಅವರು ಕೂಡಾ ಕೊರೋನಾಗೆ ಬಲಿಯಾಗಿದ್ದರು. ಇವರ ಮಕ್ಕಳು ಸಹ ಸಂಗೀತ ಸಾಧಕರಾಗಿದ್ದರು. ತಂದೆ ಮತ್ತು ತಾಯಿ ಇಬ್ಬರನ್ನು ನಾಲ್ಕು ದಿನಗಳ ಅಂತರದಲ್ಲಿ ಕಳೆದುಕೊಂಡಿರುವುದು ನಿಜಕ್ಕೂ ದುರದೃಷ್ಟಕರ. ಅವರಿಗೆ ಈ ಆಘಾತವನ್ನು ತಡೆದುಕೊಳ್ಳುವ ಶಕ್ತಿ ಭಗವಂತ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.