ಬೆಂಗಳೂರು: ಕಳೆದ 9 ದಿನಗಳಿಂದ ಆತಂಕ ಸೃಷ್ಟಿಸಿದ್ದ ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. 9ನೇ ದಿನಕ್ಕೆ ಅರಣ್ಯ ಇಲಾಖೆಯ ಆಪರೇಷನ್ ಚೀತಾ ಸಕ್ಸಸ್ ಆಗಿದ್ದು, ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ಬೇಗೂರು ಸಮೀಪದ ರಸ್ತೆ ಅಪಾರ್ಟ್ ಮೆಂಂಟ್ ಹಿಂಭಾಗದ ಕ್ವಾರೆ ಬಳಿ ಇರಿಸಿದ್ದ ಬೋನಿನಲ್ಲಿ ಚಿರತೆ ಸಿಲುಕಿದೆ. ಚಿರತೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ರವಾನೆ ಮಾಡಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.
ಬೆಂಗಳೂರು ಹೊರವಲಯದ ಬೇಗೂರು ಸಮೀಪದ ಪ್ರೆಸ್ಟೀಜ್ ಅಪಾಟ್ರ್ಮೆಂಟ್ ಹಾಗೂ ಎಳೆನಹಳ್ಳಿ ಸಮೀಪದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಚಿರತೆಯ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದರಿಂದ ನಿವಾಸಿಗಳಿಗೆ ರಾತ್ರಿ ಸಮಯ ಒಂಟಿಯಾಗಿ ಹೊರ ಬರದಂತೆ ಅರಣ್ಯ ಇಲಾಖೆ ಸೂಚನೆ ನೀಡಿತ್ತು. ಅರಣ್ಯ ಇಲಾಖೆ ಒಂದು ಭಾಗದಲ್ಲಿ ಕಾರ್ಯಾಚರಣೆ ಮಾಡಿದರೆ ಮತ್ತೊಂದು ಭಾಗದಲ್ಲಿ ಚಿರತೆ ಪ್ರತ್ಯಕ್ಷ ಆಗುತ್ತಿತ್ತು. ಚಿರತೆ ರಾತ್ರಿ ಸಮಯದಲ್ಲಿ ಓಡಾಡುತ್ತಿರುವ ಹಿನ್ನೆಲೆ ಸ್ಥಳೀಯ ನಿವಾಸಿಗಳಲ್ಲಿ ದೊಡ್ಡಮಟ್ಟದ ಆತಂಕ ಮನೆಮಾಡಿತ್ತು.