ಬೆಂಗಳೂರು: ದಕ್ಷಿಣ ಭಾರತ, ಈಶಾನ್ಯ ರಾಜ್ಯಗಳಲ್ಲಿ ಮತ್ತೆ ಕೊರೊನಾಂತಕ ಹೆಚ್ಚಾಗಿದೆ. ಕರ್ನಾಟಕ ಸೇರಿದಂತೆ ದೇಶದ 10 ರಾಜ್ಯಗಳ 46 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ 10 ರಷ್ಟಿದ್ದು, 35 ಜಿಲ್ಲೆಗಳಲ್ಲಿ ಶೇ 5ರಿಂದ 10ರಷ್ಟಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ ಕೊರೊನಾ ಹಾಟ್ ಸ್ಪಾಟ್ನಲ್ಲಿ 10 ರಾಜ್ಯಗಳಿಗೂ ಎಚ್ಚರದಿಂದಿರುವಂತೆ ಸೂಚನೆ ನೀಡಿದೆ.
ಈಗಾಗಲೇ ಕರ್ನಾಟಕ ನೆರೆ ರಾಜ್ಯಗಳಲ್ಲಿ ಕೊರೊನಾ ಸೋಂಕೀತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕೇರಳದಲ್ಲಿ ಕಳೆದ 5ದಿನಗಳಿಂದ ಪ್ರತಿನಿತ್ಯ 20ಸಾವಿರಕ್ಕೂ ಅಧಿಕ ಕೇಸ್ ಪತ್ತೆಯಾಗುತ್ತಿದ್ದು, ಇದರಿಂದ ಕರ್ನಾಟಕಕ್ಕೂ ಅಪಾಯ ಇರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ.
ಕರ್ನಾಟಕ ಹೊರತು ಪಡಿಸಿ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ, ಒಡಿಸ್ಸಾ, ಅಸ್ಸಾಂ, ಮೇಘಾಲಯ, ಮಿಜೋರಾಂ, ಮಣಿಪುರ ರಾಜ್ಯಗಳು ಕೇಂದ್ರದ ಕೊರೊನಾ ಹಾಟ್ ಸ್ಪಾಟ್ ಲಿಸ್ಟ್ ನಲ್ಲಿ ಸ್ಥಾನ ಪಡೆದಿವೆ.
ಕೇಂದ್ರ ಆರೋಗ್ಯ ಸಚಿವಾಲಯದ ಕೊರೊನಾ ನಿಯಂತ್ರಣ ಹಿನ್ನೆಲೆ ಸೂಚನೆ ನೀಡಿದ್ದು, ಈ ಎಲ್ಲಾ ರಾಜ್ಯಗಳು ಅನಗತ್ಯ ಸಂಚಾರ, ಜನದಟ್ಟನೆ, ದೊಡ್ಡ ಸಭೆ ಸಮಾರಂಭಗಳಿಗೆ ನಿಬರ್ಂಧ ಹೇರಬೇಕು. ಕಟ್ಟುನಿಟ್ಟಾಗಿ ಸೋಂಕೀತರ ಸಂಪರ್ಕಿತರನ್ನ ಟೆಸ್ಟ್ ಮಾಡಬೇಕು, ಟೆಸ್ಟಿಂಗ್ ಹೆಚ್ಚಳ ಮಾಡಬೇಕು, ಹೋಂ ಐಸೋಲೇಷನ್ನಲ್ಲಿರುವವರ ಮೇಲೆ ನಿಗಾವಹಿಸಿ, ಜಿಲ್ಲಾವಾರು ಸೀರೋ ಸರ್ವೇ ಮೂಲಕ ರೋಗ ಹರಡುವಿಕೆ ಅಂಕಿ ಅಂಶಗಳನ್ನ ಪತ್ತೆ ಮಾಡುವಂತೆ ಸಲಹೆ ನೀಡಿದೆ.