ಹಾವೇರಿ: ಎತ್ತುಗಳ ಮೈತೊಳೆಯಲು ಹೋಗಿ ಕಾಲು ಜಾರಿ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ದೂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಅಭಿಷೇಕ್ ಬಸನಗೌಡ ಹಂಡೋರಿ (14) ಮತ್ತು ಹರೀಶ್ ಬಸವರಾಜ್ ಬಾಳಿಕಾಯಿ (14) ಮೃತಪಟ್ಟ ಇಬ್ಬರು ದುರ್ದೈವಿ ಬಾಲಕರು. ಇಬ್ಬರು ಗ್ರಾಮದ ಮಾಸೂರು ರಸ್ತೆಯಲ್ಲಿರುವ ಬಂದಮ್ಮನ ಕೆರೆಗೆ ಎತ್ತುಗಳ ಮೈತೊಳೆಯಲು ಹೊಗಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾರೆ. ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಇದ್ದ ಪರಿಣಾಮ ನೀರಿನಿಂದ ಮೇಲೆ ಬರಲಾಗದೆ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ತೆಂಗಿನಮರದ ಕಾಯಿ ಬಿದ್ದು 11 ತಿಂಗಳ ಹಸುಗೂಸು ಸಾವು
ಇಬ್ಬರು ಬಾಲಕರ ಮೃತ ದೇಹಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗ್ರಾಮಸ್ಥರು ಕಾರ್ಯಚರಣೆ ನಡೆಸಿ ಹೊರ ತೆಗೆದಿದ್ದಾರೆ. ಮೃತ ಬಾಲಕರ ಮನೆಯಲ್ಲಿ ಪಾಲಕರ ಆಕ್ರಂದನ ಮುಗಿಲು ಮುಟ್ಟಿದ್ದು, ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.