ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಹೈಕೋರ್ಟ್ 5 ಲಕ್ಷ ರೂ. ದಂಡ ವಿಧಿಸಿದೆ.
ಚುನಾವಣಾ ತಕರಾರು ಅರ್ಜಿ ವಿಚಾರಣೆಗೆ ಖಂಡ್ರೆ ಗೈರಾದ ಹಿನ್ನೆಲೆ ಹೈಕೋರ್ಟ್ ದಂಡ ವಿಧಿಸಿ ಗೈರು ಹಾಜರಿಯನ್ನು ಮನ್ನಿಸಿದೆ. ಜೊತೆಗೆ ದಂಡದ ಹಣ 5 ಲಕ್ಷ ರೂಗಳನ್ನು ಸಿಎಂ ಕೋವಿಡ್-19 ನಿಧಿಗೆ ನೀಡುವಂತೆ ಸೂಚಿಸಿದೆ. ಈಶ್ವರ್ ಖಂಡ್ರೆ ಅವರ ವಿರುದ್ಧ ಡಿ.ಕೆ ಸಿದ್ರಾಮ ಅವರು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.
ಸಿದ್ರಾಮ ಅವರು, ಈಶ್ವರ್ ಖಂಡ್ರೆ ಚುನಾವಣೆಯಲ್ಲಿ ವ್ಯಾಪಕ ಅಕ್ರಮ ನಡೆಸಿದ್ದಾರೆ. ಅವರು ತನ್ನ ಆಸ್ತಿ ವಿವರ ಬಹಿರಂಗಪಡಿಸಿಲ್ಲ ಎಂದು ಆರೋಪಿಸಿ ಶಾಸಕರಾಗಿ ಈಶ್ವರ್ ಖಂಡ್ರೆ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಮನವಿ ಮಾಡಿದ್ದರು. ಈ ವಿಚಾರಣೆಗೆ ಹಾಜಾರಗಲು ಹೈಕೋರ್ಟ್ ಈಶ್ವರ್ ಖಂಡ್ರೆಯವರಿಗೆ ನೋಟಿಸ್ ನೀಡಿತ್ತು. ಆದರೆ ನೋಟಿಸ್ ನೀಡಿದ್ದರೂ ಈಶ್ವರ್ ಖಂಡ್ರೆ ವಿಚಾರಣೆಗೆ ಗೈರಾದ ಕಾರಣ ದಂಡ ವಿಧಿಸಿದೆ.
ಇದಕ್ಕೆ ಪ್ರತಿಕ್ರಿಯೇ ನೀಡಿರುವ ಈಶ್ವರ್ ಖಂಡ್ರೆ, ತಮ್ಮ ಪಿಎಗೆ ಮರೆವಿನ ರೋಗವಿದ್ದುದರಿಂದ ವಿಚಾರಣೆಯ ದಿನಾಂಕ ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿ ಕೋರ್ಟಿಗೆ ಮತ್ತೆ ಅರ್ಜಿ ಹಾಕಿದ್ದಾರೆ. ಆದ್ದರಿಂದ ನ್ಯಾ. ಕೃಷ್ಣ ಎಸ್.ದೀಕ್ಷಿತ್ರವರಿದ್ದ ಏಕಸದಸ್ಯ ಪೀಠ, 5. ಲಕ್ಷ ದಂಡ ವಿಧಿಸಿ ಗೈರನ್ನು ಮನ್ನಿಸಿದೆ.