ನವದೆಹಲಿ: ವ್ಯಕ್ತಿ ಕುಡಿದು ಮೃತಪಟ್ಟರೆ ಆತನ ಕುಟುಂಬಸ್ಥರಿಗೆ ವಿಮೆ(ಇನ್ಶೂರೆನ್ಸ್) ಹಣ ಸಿಗಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಪಘಾತದಿಂದ ಮೃತಪಟ್ಟರೆ ಅಥವಾ ಅಪಘಾತದಿಂದ ಗಂಭೀರ ಗಾಯಗೊಂಡಿದ್ದರೆ ಮಾತ್ರ ವ್ಯಕ್ತಿಯ ಕುಟುಂಬದವರು ವಿಮೆ ಹಣ ಪಡೆಯಬಹುದು. ಆದರೆ ವಿಪರೀತ ಕುಡಿದು ಬಿದ್ದು ಸಾವನ್ನಪ್ಪಿದರೆ ಆ ವ್ಯಕ್ತಿಗಳು ವಿಮೆ ಹಣಕ್ಕೆ ಅರ್ಹರಲ್ಲ ಎಂದು ಕೋರ್ಟ್ ತಿಳಿಸಿದೆ.
ಈ ತೀರ್ಪು ನೀಡಲು ಕಾರಣವೇನು..?
ವ್ಯಕ್ತಿಯೊಬ್ಬ ಅತಿಯಾಗಿ ಮದ್ಯಪಾನ ಮಾಡಿ ಉಸಿರುಗಟ್ಟಿ ಮೃತಪಟ್ಟಿದ್ದನು. ಹೀಗಾಗಿ ಆತನ ಕುಟುಂಬದವರು ವಿಮೆ ಹಣ ನೀಡುವಂತೆ ಸಂಸ್ಥೆಗೆ ಆದೇಶ ನೀಡುವಂತೆ ಕೋರಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ನಡೆಸಿದ ಕೋರ್ಟ್ ತೀರ್ಪು ಪ್ರಕಟಿಸಿದೆ.
ಆಗಿದ್ದೇನು..?
ಶಿಮ್ಲಾ ಜಿಲ್ಲೆಯ ಚೌಪಾಲ್ ರಾಜ್ಯ ಅರಣ್ಯ ನಿಗಮದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ 1997ರ ಏಪ್ರಿಲ್ ತಿಂಗಳಿನಲ್ಲಿ ಮೃತಪಟ್ಟಿದ್ದನು. ಈ ವೇಳೆ ನಡೆಸಿದ್ದ ಮರಣೋತ್ತರ ಪರೀಕ್ಷೆಯಲ್ಲಿ ಆತನ ದೇಹದ ಮೇಲೆ ಯಾವುದೇ ಗಾಯಗಳಾಗಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದುಬಂದಿತ್ತು. ಅಲ್ಲದೆ ವಿಪರೀತವಾಗಿ ಮದ್ಯ ಸೇವನೆ ಮಾಡಿರುವುದೇ ಸಾವಿಗೆ ಕಾರಣ ಎಂಬುದು ವರದಿಯಲ್ಲಿ ಬಯಲಾಗಿತ್ತು.
ಇತ್ತ ವ್ಯಕ್ತಿ ಸಾವನ್ನಪ್ಪಿದ ಬಳಿಕ ಆತನ ಕುಟುಂಬಸ್ಥರು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ(ಎನ್ಸಿಡಿಆರ್ ಸಿ) ಮೊರೆ ಹೋಗಿದ್ದರು. ಅಲ್ಲಿ ಕುಟುಂಬಕ್ಕೆ ವಿಮೆ ನೀಡಲಾಗದು ಎಂದು ಆದೇಶ ನೀಡಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಎಂ ಶಾಂತನಗೌಡರ್ ಹಾಗೂ ವಿನೀತ್ ಸರಣ್ ಅವರಿದ್ದ ಪೀಠ ಎತ್ತಿ ಹಿಡಿದಿದೆ.
ವಿಮಾ ಪಾಲಿಸಿಯ ನಿಯಮಗಳ ಪ್ರಕಾರ ಇಂತಹ ಪ್ರಕರಣದಲ್ಲಿ ವಿಮೆ ಹಣ ಸಿಗಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.