ಚಾಮರಾಜನಗರ: ಕಾವೇರಿ ನದಿಯಲ್ಲಿ ಅಕ್ರಮವಾಗಿ ಮೀನುಗಾರಿಕೆಗೆ ತೆರಳುತ್ತಿದ್ದ 8 ಮಂದಿ ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದ ಜಾಗೇರಿ ಚಿನ್ನಪ್ಪ(42), ಅಮಲ್ ಅರ್ಪುದ್ ಜಯರಾಜ್(32), ಪೀಟರ್ ಪೇರಿಯನಾಯಗಂ (35), ಸ್ಟ್ಯಾನ್ಯಿ ಜಾನ್ ಬೋಸ್ಕೊ(35), ಅರುಳ್ ರಾಜ್ (35), ಪೆರಿಯನಾಯಗಮ್ಮ(34), ಜ್ಯೋತಿಪ್ರಿಯಾ(28) ಹಾಗೂ ಸುನೀತಾ(28) ಬಂಧಿತ ಆರೋಪಿಗಳು. ಕಾವೇರಿ ವನ್ಯಜೀವಿ ವ್ಯಾಪ್ತಿಯ ಅರಣ್ಯದ ಚಿಕ್ಕಲ್ಲೂರು ಬೀಟ್ ಗೆ ಸೇರಿದ ಅರಣ್ಯದ ಎಣ್ಣೆಹೊಳೆಯ ಬಳಿ ಅಕ್ರಮವಾಗಿ ಮೀನು ಹಿಡಿಯಲು ಪರಿಕರಗಳೊಂದಿಗೆ ಆರೋಪಿಗಳು ಹೊರಟಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಾವೇರಿ ವನ್ಯಜೀವಿ ಡಿಸಿಎಫ್ ಎಸ್.ರಮೇಶ್ ಹಾಗೂ ಎಸಿಎಫ್ ಅಂಕರಾಜು ಮಾರ್ಗದರ್ಶನದಲ್ಲಿ ಇಲ್ಲಿನ ಅರಣ್ಯಾಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಐದು ಬೋಟ್, ಐದು ಬಲೆ, ಐದು ಹುಟ್ಟು, ಮೀನು ಬೇಟೆಯ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.