ಉಡುಪಿ: ನಾಡಿಗೆ ಬರುತ್ತಿರುವ ಕಾಡು ಪ್ರಾಣಿಗಳ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಮೂರು ಕಾಡು ಕೋಣ ಕಾಣಿಸಿಕೊಂಡಿವೆ.
ಕಾರ್ಕಳದ ಪೆರ್ವಾಜೆ ವಾರ್ಡ್ ನಲ್ಲಿ ಇಂದು ಕಾಡುಕೋಣ ಕಂಡು ಸಾರ್ವಜನಿಕರು ಆತಂಕಗೊಂಡಿದ್ದಾರೆ. ಏಕಾಏಕಿ ರಸ್ತೆಯಲ್ಲಿ ಮೂರು ಕಾಡುಕೋಣಗಳು ಕಾಣಿಸಿಕೊಂಡಿದೆ. ಈ ದೃಶ್ಯಗಳು ಸ್ಥಳೀಯರು ಮೊಬೈಲ್ಗಳಲ್ಲಿ ಸೆರೆಯಾಗಿದೆ. ಕಳೆದ ಒಂದೆರಡು ತಿಂಗಳಿನಿಂದ ಕಾಡುಗಳಿಂದ ಕಾಡುಕೋಣಗಳು ನಗರದತ್ತ ಮುಖ ಮಾಡುತ್ತಿದೆ. ಜನ ಓಡಾಡುವ ರಸ್ತೆಗಳು, ಜನವಸತಿ ಪ್ರದೇಶಗಳತ್ತ ಬರುತ್ತಿದೆ. ಕಾರ್ಕಳ ತಾಲೂಕು ಪಶ್ಚಿಮಘಟ್ಟದ ತಪ್ಪಲಿನಲ್ಲಿ ಇರುವುದರಿಂದ ಈ ಭಾಗದಲ್ಲಿ ಚಿರತೆ, ನವಿಲು, ಜಿಂಕೆ ಸಾಮಾನ್ಯವಾಗಿತ್ತು. ಇದೀಗ ಕೆಲ ದಿನಗಳಿಂದ ಕಾಡುಕೋಣಗಳ ಹಾವಳಿ ಕೂಡ ಜಾಸ್ತಿಯಾಗಿದೆ.
ಪೆರುವಾಜೆಯಲ್ಲಿ ಕಾಡುಕೋಣಗಳು ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರುವಷ್ಟರಲ್ಲಿ ಕಾಡುಕೋಣಗಳು ಕಣ್ಮರೆಯಾಗಿದೆ. ಪಶ್ಚಿಮ ಘಟ್ಟದ ತಪ್ಪಲು ಕೃಷಿ ಭೂಮಿ, ಗದ್ದೆಗಳಿಗೂ ಕಾಡುಕೋಣಗಳು ಇತ್ತೀಚೆಗೆ ಲಗ್ಗೆ ಇಡುತ್ತಿದೆ ಎಂದು ಕೃಷಿಕರು ದೂರಿದ್ದಾರೆ.
ಸ್ಥಳೀಯ ಅಜಯ್ ಮಾತನಾಡಿ, ಪಶ್ಚಿಮ ಘಟ್ಟಕ್ಕೆ ಹತ್ತಿರ ಇರುವುದರಿಂದ ನಮ್ಮ ಊರಿಗೆ ಹೆಚ್ಚಿನ ಕಾಡುಪ್ರಾಣಿಗಳು ಬರುತ್ತವೆ. ಬೆಳೆಯನ್ನೆಲ್ಲಾ ನಾಶ ಮಾಡುತ್ತವೆ. ಸಂಬಂಧಿಸಿದ ಶಾಸಕರು ಸಚಿವರು, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬೆಳೆದ ಬೆಳೆಯೆಲ್ಲ ಕಾಡುಪ್ರಾಣಿಗಳ ಪಾಲಾದ್ರೆ ನಮ್ಮ ಪಾಡೇನು ಎಂದು ಪ್ರಶ್ನಿಸಿದ್ದಾರೆ.