ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ಯಾಕೆ ಸೋಲಿಸಿದ್ವಿ ಎಂದು ಜನರು ಪರಿತಪಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಇಂದು ಆರಮನೆ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಯಾಕೆ ಸೋಲಿಸಿದ್ವಿ ಎಂದು ಜನ ಪರಿತಪಿಸುತ್ತಿದ್ದಾರೆ. ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ಮತ್ತೆ ತರಬೇಕು ಎಂದು ಚರ್ಚೆ ಶುರು ಆಗಿದೆ ಎಂದು ತಿಳಿಸಿದ್ದಾರೆ.
ನಾವು 2018ರಲ್ಲಿ ಜೆಡಿಎಸ್ಗೆ ಬೆಂಬಲ ನೀಡಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಸಮ್ಮಿಶ್ರ ಸರ್ಕಾರ ಐದು ವರ್ಷಗಳ ಕಾಲ ಪೂರೈಸಲಿಲ್ಲ. ನಮ್ಮ ಮತ್ತು ಜೆಡಿಎಸ್ ಶಾಸಕರನ್ನು ಹಣದ ಆಸೆ ತೋರಿಸಿ ರಾಜೀನಾಮೆ ಕೊಡಿಸಿ ಆಪರೇಷನ್ ಕಮಲ ಮಾಡಿ ಕೋಟ್ಯಂತರ ರೂ. ಖರ್ಚು ಮಾಡಿದರು. ಒಬ್ಬ ಎಂಎಲ್ಎಗೆ 20 ರಿಂದ 25 ಕೋಟಿ ಖರ್ಚು ಮಾಡಿದರು. ಇದರಿಂದ ನಾವು ಆಪರೇಷನ್ ಕಮಲವನ್ನು ತಡೆಯಲು ಆಗಲಿಲ್ಲ ಎಂದಿದ್ದಾರೆ.
ಶ್ರೀಮಾನ್ ಯಡಿಯೂರಪ್ಪ ಅವರಿಂದ ಆಪರೇಷನ್ ಕಮಲ ಅಂತ ಹೆಸರು ಬಂದಿದೆ. ಅದು 2008ರಲ್ಲಿ, ಆಗ ಅವರಿಗೆ ಬಹುಮತ ಇರಲಿಲ್ಲ ಆ ನಂತರ ಎಲೆಕ್ಷನ್ಗೆ ಹೋಗಿ ಅಲ್ಲಿ ಕೋಟಿ ಹಣ ಖರ್ಚು ಮಾಡಿ ಅಧಿಕಾರಕ್ಕೆ ಬಂದರು ಎಂದು ಸಿಎಂ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.