– ರಾಯಚೂರಿನಲ್ಲಿ ಮಂಗಳವಾರ ರಾಜ್ಯ ಮುಖಂಡರ ಸಭೆ
ರಾಯಚೂರು: ಕಾಂಗ್ರೆಸ್ ಪಕ್ಷವನ್ನ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆಳಮಟ್ಟದಿಂದ ಬಲಪಡಿಸಲು ರಾಜ್ಯ ಮುಖಂಡರ ಸಭೆ ನಾಳೆ ರಾಯಚೂರಿನಲ್ಲಿ ನಡೆಯಲಿದೆ. ಕೆಪಿಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್ ಪಾಟೀಲ್, ಮಾಜಿ ಸಂಸದ ಕೆ.ಎಸ್.ಮುನಿಯಪ್ಪ ಸೇರಿ ಹಲವಾರು ರಾಜ್ಯ ಮುಖಂಡರು ಭಾಗವಹಿಸಲಿದ್ದಾರೆ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಶಾಸಕರು, ಸಂಸದರು, ಜಿಲ್ಲಾಧ್ಯಕ್ಷರು ಸಭೆಯಲ್ಲಿ ಇರಲಿದ್ದಾರೆ. 220 ಕ್ಕೂ ಹೆಚ್ಚು ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾಯಚೂರು, ಬಳ್ಳಾರಿ, ಕಲಬುರ್ಗಿ, ಕೊಪ್ಪಳ, ಯಾದಗಿರಿ ಜಿಲ್ಲೆಯ ಕಾಂಗ್ರೆಸ್ ಮುಖಂಡರೊಂದಿಗೆ ನಾಳೆ ಬೆಳಗ್ಗೆ 11ಕ್ಕೆ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಯಲಿದೆ. ಮುಂಬರುವ ಜಿ.ಪಂ. ಹಾಗೂ ತಾ.ಪಂ. ಚುನಾವಣೆ ಗಮನದಲ್ಲಿಟ್ಟುಕೊಂಡು ಸಭೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೆಪಿಸಿಸಿ ಹೊಸ ಘಟಕ ರೆಡಿಯಾಗುತ್ತೆ ಅದರ ಸಿದ್ಧತೆ ನಡೆದಿವೆ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ.
ಇನ್ನೂ ಇದೇ ವೇಳೆ ಮಾತನಾಡಿದ ಸಲೀಂ ಅಹ್ಮದ್, ಬಿಜೆಪಿ ಸರ್ಕಾರ ಹೃದಯ ಇಲ್ಲದ ಸರ್ಕಾರ, ಆಡಳಿತ ಮಾಡಲು ಯೋಗ್ಯವಿಲ್ಲದ ಸರ್ಕಾರ. ಈ ಸರ್ಕಾರದ ಮೇಲೆ ಜನರಿಗೆ ಹೆಚ್ಚು ನಂಬಿಕೆ ಇಲ್ಲ. ಬೊಮ್ಮಾಯಿ ಬಿ.ಎಸ್ ಯಡಿಯೂರಪ್ಪ ನೆರಳು ಇದ್ದಂತೆ. ಯಡಿಯೂರಪ್ಪ ಅವಧಿಯ ಭ್ರಷ್ಟಾಚಾರ ಬೊಮ್ಮಾಯಿ ನಿವಾರಿಸುತ್ತಾರಾ ಕಾದುನೋಡಬೇಕು. ಬೊಮ್ಮಾಯಿ ಮಂತ್ರಿಮಂಡಲದಲ್ಲಿ ಯಡಿಯೂರಪ್ಪ ಬಣ ಇದೆ ಅಂತ ಸಲೀಂ ಅಹ್ಮದ್ ಹೇಳಿದರು. ಇದನ್ನೂ ಓದಿ: ಮಿತ್ರಮಂಡಳಿಯಲ್ಲಿ ಬಿರುಕು: ಎಸ್ಟಿಎಸ್ ವಿರುದ್ಧ ಹೆಚ್. ವಿಶ್ವನಾಥ್ ಬಹಿರಂಗ ಅಸಮಾಧಾನ