ಬೆಂಗಳೂರು: ಕೊಳದಲ್ಲಿ ಈಜಲು ಹೋಗಿದ್ದ ಬೆಂಗಳೂರು ಮೂಲದ ಯುವತಿ ಹಾಗೂ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಬನ್ನೇರುಘಟ್ಟದಲ್ಲಿ ನಡೆದಿದೆ.
ಡ್ಯಾನಿಶ್ (23), ಮೋಸಿಸ್ (28) ಮತ್ತು ಜಸಿಕಾ ಮೃತ ಸ್ನೇಹಿತರು. ಜಾನ್ ಮತ್ತು ದಿವ್ಯ ಎಂಬವವರ ಜೊತೆಗೆ ಈ ಮೂವರು ಸ್ನೇಹಿತರು ಬಂದಿದ್ದರು. ಜಸಿಕಾ ಮತ್ತು ಮೋಸಿಸ್ ವಿಲ್ಸನ್ ಗಾರ್ಡನ್ ಮೂಲದವರಾಗಿದ್ದು, ಡ್ಯಾನಿಶ್ ಗರುಡ ಮಹಲ್ ನಿವಾಸಿ ಎಂದು ತಿಳಿದು ಬಂದಿದೆ.
ಮೂವರು ಸ್ನೇಹಿತರು ಬನ್ನೇರುಘಟ್ಟ ಬಳಿಯ ಸುವರ್ಣಮುಖಿ ಎಂಬ ಕೊಳಕ್ಕೆ ಶುಕ್ರವಾರ ಸಂಜೆ ಹೋಗಿದ್ದರು. ಚಂಪಕದಾಮ ದೇವಸ್ಥಾನ ಬಳಿ ತಮ್ಮ ವಾಹನಗಳನ್ನು ನಿಲ್ಲಿಸಿ ಸ್ನೇಹಿತರು ತೆರಳಿದ್ದರು. ನಂತರ ಕೊಳದಲ್ಲಿ ಈಜಲು ತೆರಳಿದಾಗ ಈ ಘಟನೆ ಸಂಭವಿಸಿದೆ.
ಮಾಹಿತಿ ತಿಳಿದ ಬನ್ನೇರುಘಟ್ಟ ಪೊಲೀಸರು ಮತ್ತು ಅಗ್ನಿಶಾಮಕ ದಳ ಮೃತ ಮೃತದೇಹಕ್ಕಾಗಿ ಹುಡುಕಾಟ ಮಾಡಿದ್ದಾರೆ. ಸತತ ಕಾರ್ಯಾಚರಣೆಯ ನಂತರ ಮೂವರು ಮೃತದೇಹಗಳು ಪತ್ತೆಯಾಗಿವೆ.
ಬನ್ನೇರುಘಟ್ಟ ಕಾಡಿನಲ್ಲಿರುವ ಶಿವ ಮತ್ತು ಆಂಜನೇಯ ದೇವಸ್ಥಾನ ಬಳಿ ಸುವರ್ಣ ಮುಖಿ ಕೊಳ ಇದೆ. ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.