ಗದಗ: ಚೊಚ್ಚಲ ಹೆರಿಗೆ 108 ವಾಹನದಲ್ಲೇ ಆಗಿದ್ದು, ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷಿಸಿದರೂ ಅಂಬುಲೆನ್ಸ್ ಚಾಲಕ ಸಮಯಪ್ರಜ್ಞೆಯಿಂದ ಹೆರಿಗೆ ಮಾಡಿಸಿ ಜೀವ ಉಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಜಿಲ್ಲೆಯ ಶಿರಹಟ್ಟಿಯ 108 ಅಂಬುಲೆನ್ಸ್ ವಾಹನ ಚಾಲಕ ಮಹೇಶ್ ಮಾರನಬಸರಿ ಈ ಸಾಹಸ ಮಾಡಿದ್ದಾರೆ. ಅಂಬುಲೆನ್ಸ್ ವಾಹನದಲ್ಲಿ ನರ್ಸಿಂಗ್ ಸ್ಟಾಫ್ ಇಲ್ಲದಿದ್ದರೂ ವಾಹನದಲ್ಲೇ ಹೆರಿಗೆ ಮಾಡಿಸಿ ಚಾಲಕ 2 ಜೀವ ಉಳಿಸಿದ್ದಾರೆ. 108 ವಾಹನದಲ್ಲಿ ಚಾಲಕ ಒಬ್ಬನೇ ಇದ್ದು, ಹೆರಿಗೆ ಮಾಡಿಸಿಕೊಂಡು ಕ್ಲೀನಿಂಗ್ ಮಾಡಿ ಮಗು ಸಮೇತ ಮಹಿಳೆಯನ್ನು ಚಾಲಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಅಡವಿಸೋಮಾಪುರ ತಾಂಡದ ಸೋಮವ್ವ ಲಮಾಣಿ ಅವರಿಗೆ ಚೊಚ್ಚಲ ಹೆರಿಗೆ ಆಗಿದೆ. ಗದಗ ತಾಲೂಕಿನ ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದ್ದು, ಬಾಣಂತಿ ನಡೆದುಕೊಂಡು ಬಂದರೂ ವೀಲ್ ಚೇರ್, ಸ್ಟ್ರೀಟ್ರ್ ತರೆದೆ ಆಸ್ಪತ್ರೆ ಸಿಬ್ಬಂದಿ ದಿವ್ಯ ನಿರ್ಲಕ್ಷ್ಯ ಮೆರೆದಿದ್ದಾರೆ. ರಕ್ತ ಸ್ರಾವವಾಗುತ್ತಿದ್ದರೂ, ಬಾಣಂತಿ ವಾಹನದಿಂದ ಇಳಿದು ನಡೆದು ಬಂದಿದ್ದಾರೆ. ಆದರೆ ಚಾಲಕನ ಸಾಹಸದಿಂದಾಗಿ ಹೆರೆಗೆ ಸುಗಮವಾಗಿದೆ. ಆಸ್ಪತ್ರೆ ಸಿಬ್ಬಂದಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.