– ತಾಯಿ-ಮಗನ ಸೆಂಟಿಮೆಂಟಿಗೆ ಸ್ಥಳೀಯರು ಕಣ್ಣೀರು
ಕಾರವಾರ: ಕೊರೊನಾ ಸೋಂಕಿತ ಮಗ ತನ್ನ ಅಮ್ಮನನ್ನ ಬಿಟ್ಟು ಆಸ್ಪತ್ರೆಯಲ್ಲಿ ಇರಲು ಮುಂದಾಗದೆ ಇರೋ ಮನಕಲಕುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನಡೆದಿದೆ.
ಮಹಾರಾಷ್ಟ್ರ ಲಿಂಕ್ ಮೂಲಕ ಮುಂಡಗೋಡಿನ ಒಂದು ಕುಟುಂಬದ ಇಬ್ಬರಿಗೆ ಕೊರೊನಾ ಸೋಂಕು ಮೇ 18 ರಂದು ದೃಢವಾಗಿತ್ತು. ಇದರಲ್ಲಿ 8 ವರ್ಷದ ಬಾಲಕನಿಗೂ ಸೋಂಕು ತಗುಲಿದ್ದು ಆತನ ತಾಯಿಗೆ ಸೋಂಕು ತಗುಲಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಬಾಲಕ ಚಿಕಿತ್ಸೆ ಪಡೆಯಲು ಬರಬೇಕಾದ ಸನ್ನಿವೇಶ ಬಂದೊದಗಿತ್ತು. ಈ ನಡುವೆ ತಾಯಿ ಕರುಳು ಮಗನ ಬಿಟ್ಟು ಇರಲು ಒಪ್ಪಲಿಲ್ಲ. ಜೊತೆಗೆ ಮಗ ಕೂಡ ತಾಯಿ ಬಿಟ್ಟು ಇರಲು ಒಪ್ಪಲಿಲ್ಲ. ಒಬ್ಬರನೊಬ್ಬರು ತಬ್ಬಿ ಅಳಲು ಆರಂಭಿಸಿದರು.
ಅಮ್ಮ-ಮಗನ ಸೆಂಟಿಮೆಂಟಿಗೆ ಸಳೀಯರ ಹೃದಯ ಕರಗಿ ಕಣ್ಣಂಚು ತೇವವಾಗಿತ್ತು. ಆರೋಗ್ಯ ಇಲಾಖೆ ಸಿಬ್ಬಂದಿ ಮುಂದೆ ತಾಯಿ ಬಿಟ್ಟು ಇರಲಾರೆ ಎಂದು ಹಠ ಹಿಡಿದಿದ್ದ ಮಗನ ಅಳಲು ಕಲ್ಲು ಹೃದಯ ಕರಗಿಸುವಂತಿತ್ತು. ಕೊನೆಯಲ್ಲಿ ಹಾಗೋ- ಹೀಗೋ ಮಾಡಿ ಮಗನ ಮನವೊಲಿಸಲಾಯಿತು. ಆಸ್ಪತ್ರೆಯಲ್ಲಿ ತಾಯಿ ಜೊತೆ ಮಾತನಾಡಲು ಮೊಬೈಲ್ ನೀಡಬೇಕು ಎಂಬ ಬಾಲಕನ ಷರತ್ತಿನ ಮೂಲಕ ಸೋಂಕಿತ ಮಗನನ್ನ ಆಸ್ಪತ್ರೆಗೆ ಚಿಕಿತ್ಸೆಗೆ ಕರೆ ತರಲಾಯಿತು.